ಸೊರಬ: ಸರ್ಕಾರದ ವತಿಯಿಂದ ಉಚಿತವಾಗಿ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಗೇಜ್ ವಾಹನವೊಂದನ್ನು ದಾಳಿ ನಡೆಸಿ ಜಪ್ತಿ ಮಾಡಿರುವ ಆಹಾರ ಇಲಾಖೆ ಅಧಿಕಾರಿಗಳು, ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿಕಾರಿಪುರ ತಾಲೂಕಿನ ನೇರಲಿಗಿ ಗ್ರಾಮದ ಶಿವಕುಮಾರ್ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೊರಬ ತಾಲೂಕು ಕೋಟಿಪುರ ಎಂಬದಲ್ಲಿ ಅಶೋಕ್ ಲೇಲ್ಯಾಂಡ್ ವಾಹನವನ್ನು ತಡೆದು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ವಾಹನದಲ್ಲಿ ಅಕ್ಕಿ ಮೂಟೆಗಳು ಪತ್ತೆಯಾದ ಹಿನ್ನೆಲೆ, ಆಹಾರ ನಿರೀಕ್ಷಕ ಯೋಗೇಶ್ವರ್ ಎಂ.ಪಿ. ಅವರು ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗೂಡ್ಸ್ ವಾಹನದಲ್ಲಿ ಪರಿಶೀಲಿಸಿದಾಗ ತಲಾ 50 ಕೆ.ಜಿ. ತೂಕದ ಒಟ್ಟು 13 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 6 ಕ್ವಿಂಟಾಲ್ 50 ಕೆ.ಜಿ. ಪಡಿತರ ಅಕ್ಕಿ ಪತ್ತೆಯಾಗಿದೆ. ಜಪ್ತಿ ಮಾಡಲಾದ ಅಕ್ಕಿಯ ಒಟ್ಟು ಮೌಲ್ಯ ₹15,080 ಹಾಗೂ ವಶಪಡಿಸಿಕೊಳ್ಳಲಾದ ಲಗೇಜ್ ವಾಹನದ ಮೌಲ್ಯ ₹2 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
