ಹೊಸನಗರ: ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ಗೆ ತೆರಳಿದ್ದ ಬೆಂಗಳೂರಿನ ಯುವಕ ಉಲ್ಲಾಸ್ ಗೌಡ (28) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಪ್ರಸಿದ್ಧ ಸಿನಿಮಾ ನಿರ್ಮಾಪಕ ಬಾ.ಮಾ.ಹರೀಶ್ ಅವರ ಪುತ್ರ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಘಟನೆ ಹೇಗಾಯ್ತು?
ಉಲ್ಲಾಸ್ ಗೌಡ ಅವರು ಬೆಂಗಳೂರಿನಿಂದ ತಮ್ಮ 13 ಮಂದಿ ಸ್ನೇಹಿತರ ತಂಡದೊಂದಿಗೆ ಟಿ.ಟಿ ವಾಹನದಲ್ಲಿ ಕೊಡಚಾದ್ರಿಗೆ ಆಗಮಿಸಿದ್ದರು. ಶನಿವಾರ ಎಲ್ಲರೂ ಸೇರಿ ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದವರೆಗೆ ಟ್ರೆಕ್ಕಿಂಗ್ ಮಾಡಿದ್ದರು. ಅಲ್ಲಿಂದ ವಾಪಸ್ ಕೆಳಗಿಳಿಯುವಾಗ ಬೆಟ್ಟದ ಮೇಲಿರುವ ದೇವಸ್ಥಾನದ ಬಳಿ ಉಲ್ಲಾಸ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಸ್ನೇಹಿತರು ಮತ್ತು ಸ್ಥಳೀಯರು ಉಲ್ಲಾಸ್ ಗೌಡ ಅವರನ್ನು ಬೆಟ್ಟದಿಂದ ಕೆಳಕ್ಕೆ ತಂದು ಹತ್ತಿರದ ನಗರ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಹೊಸನಗರ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆ ಉಲ್ಲಾಸ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಉಲ್ಲಾಸ್ ಗೌಡ ಅವರಿಗೆ ಕೆಲವು ತಿಂಗಳ ಹಿಂದಷ್ಟೇ ವಿವಾಹ ನಿಶ್ಚಿತಾರ್ಥವಾಗಿದ್ದು, ಮುಂಬರುವ ಡಿಸೆಂಬರ್ನಲ್ಲಿ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ. ಘಟನೆ ಕುರಿತು ಬೆಂಗಳೂರಿನಲ್ಲಿರುವ ನಿರ್ಮಾಪಕ ಬಾ.ಮಾ.ಹರೀಶ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.