ಶಿವಮೊಗ್ಗ: ‘ಆರೋಗ್ಯವಾಗಿರುವ ಪ್ರತಿಯೊಬ್ಬರೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು’ ಎಂದು ಮೆಟ್ರೋ ಆಸ್ಪತ್ರೆಯ ತಜ್ಞ ವೈದ್ಯ ಡಾ. ಪೃಥ್ವಿ ಅಭಿಪ್ರಾಯಪಟ್ಟರು. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ನಗರದ ಹೋಟೆಲ್ ಶುಭಂ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಕ್ತದಾನ ಎಂದರೆ ಜೀವದಾನ ಮಾಡಿದಂತೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ನಮ್ಮಿಂದ ಸಲ್ಲಿಕೆಯಾಗುವ ಒಂದು ಯೂನಿಟ್ ರಕ್ತವು ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿರುವ ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯ 24ರ ಜೆಡ್.ವಿ.ಪಿ. ಜೆಸಿಐ ಸೆನೆಟರ್ ಗಣೇಶ್ ಪೈ, ಜೆಎಸಿ ಜೆವಿಸಿ ಉದಯ್ ಕಡಂಬ, ಜೆಸಿಐ ನೀಡ್ ಬ್ಲಡ್ ಕಾಲ್ ಕೋ ಆರ್ಡಿನೇಟರ್ ಶಿಲ್ಪಾ, ಜೆಕಾಂ ಟೇಬಲ್ ಚೇರ್ಮನ್ ಚಂದ್ರಹಾಸ್ ಶೆಟ್ಟಿ, ಬ್ಲಡ್ ಕೋರ್ಡಿನೇಟರ್ ಜಯಕುಮಾರ್, ದುರ್ಗಿಗುಡಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮನೋಜ್ ಕುಮಾರ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಮುಖಂಡ ಕೆ. ದೇವೇಂದ್ರಪ್ಪ, ಮುಖಂಡ ಗೋವಿಂದರಾಜ್ ಹಾಗೂ ರೆಡ್ಕ್ರಾಸ್ ಸಂಸ್ಥೆಯ ವೈದ್ಯ ಡಾ. ದಿನಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
