ಶಿವಮೊಗ್ಗ: ವರ್ತಕರ ವಿಶ್ವಾಸವನ್ನು ಗಳಿಸುವುದು ಅತ್ಯಂತ ಮುಖ್ಯವಾಗಿದ್ದು, ಅದೇ ವಿತರಕರ ದೊಡ್ಡ ಬಂಡವಾಳವಾಗಿರುತ್ತದೆ. ನಿಷ್ಠೆ, ಗುಣಮಟ್ಟ ಮತ್ತು ಸಮಯ ಪಾಲನೆಯಿಂದ ವ್ಯವಹಾರ ನಡೆಸಿದರೆ ಯಶಸ್ಸು ಗಳಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಎಂ.ಸಿ. ದೇವರಾಜ್ ಹೇಳಿದರು. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಜಿಲ್ಲಾ ವಿತರಕರ ಸಂಘದ ಮೂರನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ‘ಡಿಜಿಟಲ್ ವ್ಯಾಪಾರ, ಆನ್ಲೈನ್ ಸ್ಪರ್ಧೆ, ಬೆಲೆ ಏರಿಳಿತ, ಸರ್ಕಾರದ ಹೊಸ ನಿಯಮಗಳು ಹಾಗೂ ಮಾರುಕಟ್ಟೆಯ ಅನಿಶ್ಚಿತತೆಗಳ ನಡುವೆ ವಿತರಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭ ಸಂಘವು ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಹಾಗೂ ವಿತರಕರ ಸಂಘದ ಗೌರವಾಧ್ಯಕ್ಷ ಬಿ. ಗೋಪಿನಾಥ್ ಮಾತನಾಡಿ, ‘ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿತರಕರ ದಿನಾಚರಣೆಯನ್ನು ಶಿವಮೊಗ್ಗದಲ್ಲೇ ಮೊದಲು ಆಚರಿಸಲು ಆರಂಭಿಸಿದ್ದು ಹೆಮ್ಮೆಯ ವಿಚಾರ. ಕಳೆದ ಎರಡು ವರ್ಷಗಳಿಂದ ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಜಿತ ಸಂಸ್ಥೆಗಳಲ್ಲಿ ಈ ಸಂಘವು ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು.
ಇದೇ ಸಂದರ್ಭ ಸಂಘದ ಮಾಜಿ ಅಧ್ಯಕ್ಷ ನಟರಾಜ್, ಹಾಜಿ ಇಕ್ಬಾಲ್ ಶೆಟ್, ಎ.ಎನ್. ಪ್ರಕಾಶ್ ಹಾಗೂ ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಉಡುಗಣಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿತರಕರ ಸಂಘದ ಉಪಾಧ್ಯಕ್ಷ ಬದರಿನಾಥ್ ಬಿ.ಆರ್., ಕಾರ್ಯದರ್ಶಿ ಗಿರೀಶ್ ಒಡೆಯರ್, ಗೌರವ ಕಾರ್ಯದರ್ಶಿ ಶ್ರೀನಿವಾಸ್ ಕೆ.ಎಸ್., ಖಜಾಂಚಿ ಚಂದ್ರಶೇಖರ್ ಕೆ.ಕೆ., ವಿಶೇಷ ಆಹ್ವಾನಿತರಾದ ಹಾಜಿ ಸುಲೇಮಾನ್, ನಿರ್ದೇಶಕರಾದ ಮೋಹನ್ ಕೆ.ಎಸ್., ನವೀನ್ ಜವಳಿ, ಮಹಾರುದ್ರಪ್ಪ, ಕೆ.ವಿ. ಕುಮಾರ್, ಎ.ಎಂ. ಮೊಹಮ್ಮದ್ ಇಕ್ಬಾಲ್, ಸುರೇಂದ್ರನಾಥ್, ರಾಘವೇಂದ್ರ ಎಂ.ಯಾರಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.