ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ವೃದ್ಧೆಯೊಬ್ಬರ ಬ್ಯಾಗ್ನಿಂದ ₹1.20 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದೆ. ಘಟನೆ ಬಳಿಕ ಆರೋಗ್ಯ ಏರುಪೇರಾಗಿದ್ದರಿಂದ ತಡವಾಗಿ ದೂರು ನೀಡಲಾಗಿದೆ.
ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಸಮೀಪದ ರಂಗನಾಥಪುರದ ನಿವಾಸಿ ಮಾರಮ್ಮ (70) ಚಿನ್ನದ ಸರ ಕಳೆದುಕೊಂಡವರು. ಮಾರಮ್ಮ ಅವರು ಜೂನ್ 17ರಂದು ತಮ್ಮ ಮೊಮ್ಮಗನ ಜೊತೆಗೆ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ಆವರಣದಲ್ಲಿರುವ ಹೋಟೆಲ್ನಲ್ಲಿ ತಿಂಡಿ ತಿಂದು ಬಿಲ್ ಪಾವತಿಸಲು ಬ್ಯಾಗ್ನಲ್ಲಿದ್ದ ಕೈ ಪರ್ಸ್ ತೆಗೆದು ನೋಡಿದಾಗ, ಅದರಲ್ಲಿದ್ದ 38 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ಅಥವಾ ಹೋಟೆಲ್ನಲ್ಲಿ ಇದ್ದ ಸಂದರ್ಭ ಕಳ್ಳರು ಪರ್ಸ್ನಲ್ಲಿದ್ದ ಸರ ಕಳ್ಳತನ ಮಾಡಿದ್ದಾರೆ ಎಂದು ವೃದ್ಧೆ ದೂರಿನಲ್ಲಿ ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.