ಶಿವಮೊಗ್ಗ: ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ 2026ನೇ ಸಾಲಿನ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ ನೆರವೇರಿತು.
ಜೂನ್ 28ರಿಂದ ಜುಲೈ 7ರ ವರೆಗೆ ನಡೆದ ಬಂದೂಕು ತರಬೇತಿ ಶಿಬಿರದಲ್ಲಿ ಒಟ್ಟು 450 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರು ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಿದರು. ಇದೇ ವೇಳೆ ಫೈರಿಂಗ್ನಲ್ಲಿ ಅತಿ ಹೆಚ್ಚು ಅಂಕ ಪಡೆದ 24 ಶಿಬಿರಾರ್ಥಿಗಳಿಗೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ಶಿಬಿರಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.

##ತರಬೇತಿಯಲ್ಲಿ ಏನೇನಿತ್ತು?
ಶಿಬಿರದ ಅವಧಿಯಲ್ಲಿ ನ್ಯಾಯವಾದಿ ಶ್ರೀಪಾಲ್ ಅವರು ಶಿಬಿರಾರ್ಥಿಗಳಿಗೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಅದರ ಅರಿವಿನ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಇದರೊಂದಿಗೆ ದೈಹಿಕ ವ್ಯಾಯಾಮ ಹಾಗೂ ಡಿಎಆರ್ ಶಸ್ತ್ರಾಗಾರದ ಸಿಬ್ಬಂದಿಯಿಂದ ಆಯುಧಗಳೊಂದಿಗೆ ಗುರಿ ಅಭ್ಯಾಸ ಮಾಡಿಸಲಾಯಿತು. ಆಯುಧಗಳ ಪರವಾನಗಿ, ಡೆಪಾಸಿಟ್ ಪ್ರಕ್ರಿಯೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಸಿಪಿಆರ್ ತರಬೇತಿ ಹಾಗೂ ಜಿಲ್ಲಾ ಅಗ್ನಿಶಾಮಕ ದಳದವರಿಂದ ವಿಪತ್ತು ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
ಭದ್ರಾವತಿ ತಾಲ್ಲೂಕಿನ ಹೊನ್ನಟ್ಟಿ ಹೊಸೂರು ಫೈರಿಂಗ್ ರೇಂಜ್ನಲ್ಲಿ ಶಿಬಿರಾರ್ಥಿಗಳಿಗೆ ಅಂತಿಮ ಫೈರಿಂಗ್ ಪ್ರಾಕ್ಟೀಸ್ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ.ಕಾರಿಯಪ್ಪ, ಡಿಎಆರ್ ಪೊಲೀಸ್ ಉಪಾಧೀಕ್ಷಕ ದಿಲೀಪ್.ಎಸ್.ವಿ. ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ತರಬೇತುದಾರರು ಉಪಸ್ಥಿತರಿದ್ದರು.