NEWS HIGHLIGHTS
ಶಿವಮೊಗ್ಗ: ತಾಲೂಕಿನ ಗೆಜ್ಜೆನಹಳ್ಳಿ ಗ್ರಾಮದ ತೋಟವೊಂದಕ್ಕೆ ನುಗ್ಗಿದ ಕಳ್ಳರು, ಕಟಾವಿಗೆ ಬಂದಿದ್ದ ಅಂದಾಜು ₹1,20,000 ಮೌಲ್ಯದ 250 ಬಾಳೆಗೊನೆಗಳನ್ನು ಕಳ್ಳತನ ಮಾಡಿದ್ದಾರೆ.
ಗೆಜ್ಜೆನಹಳ್ಳಿಯ ರೈತ ನಾಗರಾಜ ನಾಯ್ಕ ತಮ್ಮ ತೋಟದಲ್ಲಿ ಉಪಬೆಳೆಯಾಗಿ ಬಾಳೆಯನ್ನು ಬೆಳೆದಿದ್ದರು. ಸದ್ಯ ಬಾಳೆಯು ಸಂಪೂರ್ಣ ಫಸಲಿಗೆ ಬಂದಿದ್ದು, ಇನ್ನೇನು ಎರಡು ಮೂರು ದಿನಗಳಲ್ಲಿ ಕಟಾವು ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ನಾಗರಾಜ ನಾಯ್ಕ ಅವರು ಫಸಲನ್ನು ತಕ್ಷಣ ಕಟಾವು ಮಾಡಲು ಸಾಧ್ಯವಾಗಿರಲಿಲ್ಲ. ಅಂದು ಎಂದಿನಂತೆ ತೋಟದ ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮಾಲೀಕರು ಮನೆಗೆ ಮರಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನ ಬೆಳಿಗ್ಗೆ 7 ಗಂಟೆಗೆ ತೋಟಕ್ಕೆ ಬಂದು ನೋಡಿದಾಗ, 250 ಬಾಳೆಗೊನೆಗಳನ್ನು ಕಟಾವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.