ಶಿವಮೊಗ್ಗ: ನಗರದ ಸೈನಿಕ ಉದ್ಯಾನವನದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಹುತಾತ್ಮರಿಗೆ ಪುಷ್ಪನಮನ ಅರ್ಪಿಸಿ, ಬೈಕ್ ಜಾಥಾ ನಡೆಸುವ ಮೂಲಕ ಆಚರಿಸಲಾಯಿತು.
ಹುತಾತ್ಮರಿಗೆ ಗೌರವ ಸಲ್ಲಿಸಿದ ಬಳಿಕ ನಿವೃತ್ತ ಕರ್ನಲ್ ರಾಮಚಂದ್ರ ಮಾತನಾಡಿದರು. ಇದೇ ವೇಳೆ ಮೇಜರ್ ರೋಷನ್ ಕೆ.ವಿ. ಅವರನ್ನು ಗೌರವಿಸಲಾಯಿತು. ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸೇವೆಯಲ್ಲಿರುವ ಹಾಗೂ ದೀರ್ಘಕಾಲ ಸೇವೆ ಸಲ್ಲಿಸಿರುವ ಮಾಜಿ ಸೈನಿಕರ ಕಾಳಜಿ ಅತ್ಯಂತ ಪ್ರಾಮುಖ್ಯತೆ ಹೊಂದಿದೆ ಎಂದರು.

ಸೈನಿಕ ಕಲ್ಯಾಣ ಇಲಾಖೆ ಕಚೇರಿಯಿಂದ ಹೊರಟ ಬೈಕ್ ಜಾಥಾವು ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಆದಿಚುಂಚನಗಿರಿ ವೃತ್ತ, ಅಶೋಕ ವೃತ್ತ, ಅಮೀರ್ ಅಹಮದ್ ವೃತ್ತ, ಗೋಪಿ ವೃತ್ತ ಹಾಗೂ ಮಹಾವೀರ್ ವೃತ್ತದ ಮೂಲಕ ಸಾಗಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ವಿ. ಕೃಷ್ಣ ರೆಡ್ಡಿ, ಕಾರ್ಯದರ್ಶಿ ಉಮೇಶ್ ಬಾಪಟ್, ಸಹಾಯಕ ನಿರ್ದೇಶಕ ಡಾ. ಸಿ.ಎ. ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.