ಶಿವಮೊಗ್ಗ ಲೈವ್.ಕಾಂ | ಹೊಸನಗರ
ಕೊಡಚಾದ್ರಿ ಬೆಟ್ಟದಲ್ಲಿ ಪ್ರವಾಸಿಗನೊಬ್ಬ ಆಯತಪ್ಪಿ ಕಂದಕಕ್ಕೆ ಬಿದ್ದು ಗಾಯಗೊಂಡಿದ್ದಾನೆ. ಜೀಪ್ ಚಾಲಕರ ಪ್ರವಾಸಿಗನ ರಕ್ಷಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಕುಮುಟಾ ಮೂಲದ ಪ್ರದೀಪ್ ಎಂಬುವವರು ಪ್ರವಾಸಕ್ಕಾಗಿ ಕೊಡಚಾದ್ರಿ ಬೆಟ್ಟಕ್ಕೆ ತೆರಳಿದ್ದರು. ಶಂಕರಾಚಾರ್ಯ ಪೀಠದ ಸಮೀಪದ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಲೆ ಸುತ್ತಿ ಆಯತಪ್ಪಿದ್ದಾರೆ. ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯನ್ನು ಗಮನಿಸಿದ ಪ್ರವಾಸಿಗರು ತಕ್ಷಣವೇ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದೇ ಸಮಯದಲ್ಲಿ ಅಲ್ಲಿನ ಪ್ರವಾಸಿ ಜೀಪ್ ಚಾಲಕರು ಕೂಡಲೇ ಎಚ್ಚೆತ್ತುಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕೊಲ್ಲೂರು, ನಿಟ್ಟೂರು ಮತ್ತು ಸಂಪೆಕಟ್ಟೆ ಭಾಗದ ಜೀಪ್ ಚಾಲಕರು ಕಂದಕಕ್ಕೆ ಇಳಿದು ಪ್ರದೀಪ್ ಅವರನ್ನು ರಕ್ಷಿಸಿದ್ದಾರೆ. ಪ್ರದೀಪ್ ಅವರ ತಲೆ, ಕೈ ಮತ್ತು ಕಾಲು ಭಾಗಕ್ಕೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.