ಶಿವಮೊಗ್ಗ ಲೈವ್
ಆಯನೂರು: ಸಮೀಪದ ಬಾಳೆಕೊಪ್ಪದ ರೈತನ ಜಮೀನಿನಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರ ಮಾಡುವುದನ್ನು ವಿರೋಧಿಸಿ ಗ್ರಾಮಸ್ಥರು ಕುಂಸಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡದ ಹಿನ್ನೆಲೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಬಾಳೆಕೊಪ್ಪದ ಈಶ್ವರಪ್ಪ ಎಂಬುವವರ ಜಮೀನಿನಲ್ಲಿ ಅಳವಡಿಸಿರುವ ಟಿಸಿಯನ್ನು ಸ್ಥಳಾಂತರಿಸಬಾರದು ಎಂದು ರೈತರು ಪಟ್ಟು ಹಿಡಿದರು. ಇನ್ನೊಬ್ಬರ ಹಿತಾಸಕ್ತಿ ಕಾಪಾಡಲು ತಮ್ಮ ಜಮೀನಿನ ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರಿಸುವುದು ಸರಿಯಲ್ಲ ಎಂದು ಗ್ರಾಮಸ್ಥರು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಎಇ ಜಗದೀಶ್ ಅವರು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಸುರೇಶ್, ಆರ್.ವಿ.ರುದ್ರೇಶ, ಈಶ್ವರಪ್ಪ, ಮಂಜು, ಚಂದ್ರು, ವೀರೇಶ, ಜಗದೀಶ, ರಮೇಶ, ಷಣ್ಮುಖ ಹಾಗೂ ರುದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.