ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕುರಿತು ಪಶ್ಚಿಮಘಟ್ಟ ವ್ಯಾಪ್ತಿಯ ರೈತರು ಆತಂಕದಲ್ಲಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ವರದಿಯನ್ನು ಯಥಾವತ್ತು ಜಾರಿಗೊಳಿಸುವ ಬದಲು ಪುನರ್ ವಿಮರ್ಶೆ ಮಾಡಬೇಕು. ಈ ಹಿನ್ನೆಲೆ ಗಾಜನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಜನ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮತ್ತೂರು ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರಿಕೃಷ್ಣ, ಸೆ.10 ಮತ್ತು 11ರಂದು ಪಾದಯಾತ್ರೆ ಮತ್ತು ಜನಜಾಗೃತಿ ಸಭೆಗಳನ್ನು ನಡೆಸಲಾಗುತ್ತದೆ. ಶಿವಮೊಗ್ಗ ತಾಲ್ಲೂಕು ಹಾಲಲಕ್ಕವಳ್ಳಿಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಬಿಜೆಪಿಯ ತೀರ್ಥಹಳ್ಳಿ ಮಂಡಲದ ಅಧ್ಯಕ್ಷ ಹೆದ್ದೂರು ನವೀನ್ ಸೇರಿ ಹಲವರು ಭಾಗವಹಿಸಲಿದ್ದಾರೆ. ಸೆ.11 ಉಂಬ್ಳೆಬೈಲಿನಲ್ಲಿ ಜನಜಾಗೃತಿ ಸಮಾವೇಶ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ.ಜಗದೀಶ್ ಸೇರಿ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಎಲ್ಲೆಲ್ಲಿ ಸಾಗಲಿದೆ ಪಾದಯಾತ್ರೆ?
ಸೆ.10ರಂದು ಹಾಲಲಕ್ಕವಳ್ಳಿಯಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಕಡೇಕಲ್, ಕುಸ್ಕೂರು, ಯರಗನಾಳ್, ಲಕ್ಕಿನಕೊಪ್ಪ ಸರ್ಕಲ್ವರೆಗೆ ಪಾದಯಾತ್ರೆ ಸಾಗರಲಿದೆ. ಸೆ.11ರಂದು ತೋಟದಕೆರೆಯಿಂದ ಪಾದಯಾತ್ರೆ ಆರಂಭವಾಗಲಿದೆ. ಗಣೇದಾಳು, ಉಂಬ್ಳೆಬೈಲಿಗೆ ತಲುಪಲಿದೆ. ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ಸಾರಿಗೆರೆ, ಕೈದೊಟ್ಲು, ಸಿದ್ದಮ್ಮಾಜಿ ಹೊಸೂರು, ಲಿಂಗಾಪುರ, ಕಾಕನಹಸೂಡಿ ತಲುಪಲಿದೆ. ಅಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹರಿಕೃಷ್ಣ ತಿಳಿಸಿದರು.
ಪಾದಾಯಾತ್ರೆಯಲ್ಲಿ ಸುಮಾರು ಒಂದು ಸಾವಿರ ಜನರು ಭಾಗವಹಿಸಲಿದ್ದಾರೆ. ಸುಮಾರು 25 ಕಿ.ಮೀ. ಪಾದಯಾತ್ರೆ ಸಾಗಲಿದೆ.
– ಹರಿಕೃಷ್ಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ
ಪತ್ರಿಕಾಗೋಷ್ಠಿಯಲ್ಲಿ ಮತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ, ಪ್ರಮುಖರಾದ ಕುಮಾರ್.ಬಿ.ಗೌಡ, ಗಣೇಶ್ ಬಿಳಿಕಿ, ರಾಜೇಶ್, ಕುಮಾರ್ ಗಾಜನೂರು, ಚಂದ್ರಶೇಖರ್.ಎಸ್, ಮಂಜುನಾಥ್.ಎನ್ ಉಪಸ್ಥಿತರಿದ್ದರು.