ಶಿವಮೊಗ್ಗ ಲೈವ್.ಕಾಂ |SHIMOGA NEWS | 22 ಅಕ್ಟೋಬರ್ 2021
ಕಾಮಗಾರಿಯ ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಹಣದ ಅರ್ಧ ಭಾಗವನ್ನು ಸ್ವಿಕರಿಸುತ್ತಿದ್ದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.
ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೇಣಿ ಕಣ್ಣನ್ (47) ಎಸಿಬಿ ಬಲೆಗೆ ಬಿದ್ದವರು.
ಮುದ್ದಿನಕೊಪ್ಪ ಗ್ರಾಮದ ನಿವಾಸಿಯೊಬ್ಬರು ಗುತ್ತಿಗೆದಾರರೊಬ್ಬರ ಪರವಾಗಿ ಕಟ್ಟಡ ಕಾಮಗಾರಿಯೊಂದನ್ನು ಪೂರ್ಣಗೊಳಿಸಿದ್ದರು. 2020ರ ಜನವರಿಯಲ್ಲೇ ಕಾಮಗಾರಿ ಮುಕ್ತಾಯವಾಗಿತ್ತು.
ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು 50 ಸಾವಿರ ರೂ. ಕೊಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೇಣಿ ಕಣ್ಣನ್ ಬೇಡಿಕೆ ಇಟ್ಟಿದ್ದರು. ಇವತ್ತು 25 ಸಾವಿರ ರೂ.ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೇಣಿ ಕಣ್ಣನ್ ಅವರನ್ನು ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ.