SHIVAMOGGA LIVE NEWS | 8 DECEMBER 2023
BHADRAVATHI : ಅನುಮತಿ ಇಲ್ಲದೆ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮತ್ತು ಉತ್ಪಾದನೆ ಆರೋಪದ ಹಿನ್ನೆಲೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಗ್ರೋ ಕೆಮಿಕಲ್ಸ್ ಕಂಪನಿಯೊಂದರ ಮೇಲೆ ದಾಳಿ (Raid) ನಡೆಸಲಾಗಿದೆ. 1.31 ಕೋಟಿ ರೂ. ಮೊತ್ತದ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮತ್ತು ಉತ್ಪಾದನೆ ಮಾಡಿದ ಮಾಹಿತಿ ಆಧಾರದಲ್ಲಿ ಜಾಗೃತ ಕೋಶದ ಅಪರ ಕೃಷಿ ನಿರ್ದೇಶಕರು, ಮೈಸೂರು ಜಾಗೃತ ಕೋಶದ ಜಂಟಿ ನಿರ್ದೇಶಕರು ಮತ್ತು ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಮಾಚೇನಹಳ್ಳಿಯ ಆಗ್ರೋ ಕೆಮಿಕಲ್ಸ್ ಸಂಸ್ಥೆ ಮೇಲೆ ದಾಳಿ(Raid) ನಡೆಸಲಾಗಿದೆ.
ಇದನ್ನೂ ಓದಿ- ಪೊಲೀಸ್ ಕ್ವಾರ್ಟರ್ಸ್ನ ಬೃಹತ್ ಗೇಟ್ ಕಳಚಿ ಬಿದ್ದು ಬಾಲಕನ ತಲೆಗೆ ಗಾಯ
ದಾಳಿ ವೇಳೆ ರಸಗೊಬ್ಬರ ರಾಕ್ ಪಾಸ್ಪೇಟ್, ಕಾಲ್ಸಿಯಂ ನೈಟ್ರೇಟ್, ಮೆಗ್ನಿಷಿಯಂ ಸಲ್ಫೇಟ್, ಗ್ರೀನ್ ಪಾಸ್ಪರಸ್ ವಶಕ್ಕೆ ಪಡೆಯಲಾಗಿದೆ. ಇವುಗಳ ಅಂದಾಜು ಮೌಲ್ಯ 1.31 ಕೋಟಿ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.