ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜೂನ್ 2020
ಕೊನೆಗೂ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆಗೆ ದಿನಾಂಕ ನಿಗದಿಯಾಗಿದೆ. ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಜಾಗದಲ್ಲಿ ಕೆಲಸವು ಆರಂಭವಾಗಿದೆ.
ಏನೆಲ್ಲ ಕೆಲಸಗಳು ಆರಂಭವಾಗಿದೆ?
ಶಿವಮೊಗ್ಗ ವಿಮಾನ ನಿಲ್ದಾಣದ ನಿಗದಿತ ಸ್ಥಳದಲ್ಲಿ ಈಗಾಗಲೇ ಜೆಸಿಬಿ ಯಂತ್ರಗಳು ಕಾರ್ಯಾಚರಣೆ ಆರಂಭಿಸಿವೆ. ಮೂರ್ನಾಲ್ಕು ದಿನದಿಂದ ಸಿವಿಲ್ ಕೆಲಸಗಳು ಶುರುವಾಗಿದೆ. ವಿಮಾನ ನಿಲ್ದಾಣದ ಕಾಂಪೌಂಡ್, ಕಟ್ಟಡಗಳು, ರನ್ ವೇ ನಿರ್ಮಾಣ ಕಾರ್ಯ ನಡೆಯುತ್ತಿದೆ. ತೀರ್ಥಹಳ್ಳಿಯ ನ್ಯಾಷನಲ್ ಕನ್ಸ್ಟ್ರಕ್ಷನ್ ಕಂಪನಿಗೆ ಈ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿದೆ.
ಶಂಕುಸ್ಥಾಪನೆಗೆ ಡೇಟ್ ಫಿಕ್ಸ್
ಕೆಲಸ ಆರಂಭವಾಗಿರುವ ಬೆನ್ನಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೊಮ್ಮೆ ಶಂಕುಸ್ಥಾಪನೆ ಕಾರ್ಯ ನಡೆಯುತ್ತಿದೆ. ಜೂನ್ 15ರಂದು ಸಂಕುಸ್ಥಾಪನೆ ನೆರವೇರಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ.
ಇದು ಎರಡನೇ ಶಂಕುಸ್ಥಾಪನೆ
ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ಒದಗಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಟೆಂಡರ್ ಪಡೆದುಕೊಂಡಿದ್ದ ಕಂಪನಿ ಹಲವು ಹಗರಣಗಳಲ್ಲಿ ಸಿಲುಕಿದ್ದರಿಂದ, ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ಪುನಾರಂಭವಾಗುತ್ತಿದೆ.
ಟೆಂಡರ್ ಸಮಸ್ಯೆ, ಕರೋನ ಕಂಟಕ
ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಟೆಂಡರ್ ಕರೆಯಲಾಗಿತ್ತು. ಸಿವಿಲ್ ಮತ್ತು ಟೆಕ್ನಿಕಲ್ ಕೆಲಸಗಳನ್ನು ಒಟ್ಟಾಗಿ ಸೇರಿಸಿ ಟೆಂಡರ್ ಕರೆಯಲಾಗಿತ್ತು. ಆದರೆ ದೊಡ್ಡ ಮೊತ್ತವಾಗಿದ್ದರಿಂದ ಯಾವುದೆ ಕಂಪನಿ ಮುಂದೆ ಬಂದಿರಲಿಲ್ಲ. ಹಾಗಾಗಿ ಸಿವಿಲ್ ಕಾಮಗಾರಿ ಮತ್ತು ಟೆಕ್ನಿಕಲ್ ಕೆಲಗಳನ್ನು ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು. ಈಗ ಕಾಮಗಾರಿ ಆರಂಭವಾಗಿದೆ.
ಹೇಗಿರುತ್ತೆ ವಿಮಾನ ನಿಲ್ದಾಣ?
200 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 120 ಕೋಟಿ ರೂ. ವೆಚ್ಚದಲ್ಲಿ ರನ್ ವೇ, ಕಾಂಪೌಂಡ್ ಸೇರಿದಂತೆ ಸಿವಿಲ್ ಕೆಲಸಗಳು ಆಗಲಿವೆ. ಈ ಹಿಂದೆ 1200 ಮೀಟರ್ ರನ್ ವೇ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಆದರೆ ಈಗ 1900 ಮೀಟರ್ಗೆ ಹೆಚ್ಚಿಸಲಾಗಿದೆ. ಈ ಕಾಮಗಾರಿಗಳು ಮುಗಿಯುವ ವೇಳೆ ಎರಡನೇ ಹಂತದಲ್ಲಿ ಟೆಕ್ನಿಕಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]