ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MAY 2021
ಕರೋನ ಸೋಂಕು ಹಲವರನ್ನು ಬಲಿ ಪಡೆದಿದೆ. ಆಪ್ತರನ್ನು, ಕುಟುಂಬದವರನ್ನು ಕಳೆದುಕೊಂಡು ಜನರು ದುಃಖದಲ್ಲಿದ್ದಾರೆ. ಇದೆ ಸಮಯವನ್ನು ಬಂಡವಾಳ ಮಾಡಿಕೊಂಡು ಹಲವರು ದುಡ್ಡು ಮಾಡುವ ದಂಧೆಗೆ ಇಳಿದಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಆವರಣದಲ್ಲಿ ಆಂಬುಲೆನ್ಸ್ನವರ ‘ದಾದಾಗಿರಿ’ ಇದಕ್ಕೆ ಉದಾಹರಣೆಯಾಗಿದ್ದು, ಶಾಸಕರೊಬ್ಬರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕರೋನ ನಿಯಂತ್ರಣ ಸಂಬಂಧ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಆಂಬುಲೆನ್ಸ್ ದಾದಾಗಿರಿ ಬಗ್ಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದೇನು?
ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಆಂಬುಲೆನ್ಸ್ನವರ ದಾದಾಗಿರಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಗಮನ ಹರಿಸಬೇಕು.
ಶವಾಗಾರದಿಂದ ನಮ್ಮೂರಿಗೆ ಮೃತದೇಹ ತರಲು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ನಿಯಂತ್ರಣ ಹೇರಬೇಕು.
ನಮ್ಮೂರಿನಿಂದ ಬಂದ ಆಂಬುಲೆನ್ಸ್ಗಳಲ್ಲಿ ಮೃತದೇಹಗಳನ್ನು ಸಾಗಿಸಲು ಇಲ್ಲಿ ಅವಕಾಶವನ್ನೆ ನೀಡುತ್ತಿಲ್ಲ. ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವವರಿಗೆ ಈ ರೀತಿ ದಾದಾಗಿರಿ ಮಾಡುವುದು ಸರಿಯಲ್ಲ.
ಜಿಲ್ಲಾಧಿಕಾರಿ ಹೇಳಿದ್ದೇನು?
ಈಗಾಗಲೇ ಆಂಬುಲೆನ್ಸ್ಗಳಿಗೆ ಇಂತಿಷ್ಟು ರೇಟು ಎಂದು ನಿಗದಿಪಡಿಸಲಾಗಿದೆ. ಶವಾಗಾರದ ಬಳಿ ಅದರ ಬೋರ್ಡ್ ಕೂಡ ಹಾಕಲಾಗಿದೆ. ಆರ್ಟಿಒ ಮತ್ತು ಪೊಲೀಸರು ಒಳಗೊಂಡ ತಂಡ ರಚಿಸಿ ಶವಾಗಾರದ ಬಳಿ ನಿಯೋಜಿಸುವ ಯೋಚನೆ ಇದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]