ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಅಕ್ಟೋಬರ್ 2021
ಬೈಕಿನ ಫುಟ್ ರೆಸ್ಟ್ ಮೇಲೆ ಕಾಲಿಟ್ಟ ವಿಚಾರಕ್ಕೆ ಯುವಕರ ಮಧ್ಯೆ ಗಲಾಟೆಯಾಗಿದೆ. ಘಟನೆಯಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಹರಕೆರೆಯಲ್ಲಿ ಘಟನೆ ಸಂಭವಿಸಿದೆ. ಶಿವಾಲಯ ಸಮೀಪ ಟೀ ಅಂಗಡಿಯೊಂದರ ಬಳಿ ಗಲಾಟೆಯಾಗಿದೆ.
ಕಾಲಿಟ್ಟಿದ್ದಕ್ಕೆ ಶುರುವಯ್ತು ಜಗಳ
ಇತ್ತೀಚೆಗೆ ಸುನಿಲ್ ಎಂಬುವವರು ಸ್ನೇಹಿತನೊಂದಿಗೆ ವಾಕಿಂಗ್’ಗೆ ತೆರಳಿದ್ದರು. ಮಳೆ ಬಂದಿದ್ದರಿಂದ ಟೀ ಅಂಗಡಿಯೊಂದರ ಮುಂದೆ ನಿಂತಿದ್ದರು. ಆ ಹೊತ್ತಿಗೆ ಸುನಿಲ್’ನ ಸಹೋದರ ಪ್ರಕಾಶ್ ಬೈಕಿನಲ್ಲಿ ಅಲ್ಲಿಗೆ ಬಂದಿದ್ದಾರೆ.
ಅಲ್ಲಿಯೇ ಇದ್ದ ಆದರ್ಶ್ ಮತ್ತು ಆಕಾಶ್ ಎಂಬುವವರು ಪ್ರಕಾಶ್ ಅವರ ಬೈಕಿನ ಫುಟ್ ರೆಸ್ಟ್ ಮೇಲೆ ಕಾಲಿಟ್ಟಿದ್ದಾರೆ. ಕಾಲು ತೆಗೆಯುವಂತೆ ಪ್ರಕಾಶ್ ಹೇಳಿದ್ದಾರೆ. ಈ ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆಯಾಗಿದೆ. ಆದರ್ಶ ಮತ್ತು ಆಕಾಶ್ ಅವರು ತಮ್ಮ ಸ್ನೇಹಿತರನ್ನು ಕರೆಯಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡಿದ್ದ ಸುನಿಲ್ ಮತ್ತು ಪ್ರಕಾಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.