SHIVAMOGGA LIVE NEWS | 15 MARCH 2023
SHIMOGA | ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಮೇಲೆ ದಾಳಿ (Attack) ನಡೆಸಲಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಹೊನ್ನಾಳಿ ತಾಲೂಕು ಚೀಲೂರು ಸಮೀಪದ ಬೋವಿನ ಕೋವಿ ಬಳಿ ದಾಳಿಯಾಗಿದೆ (Attack). ಕೊಲೆ ಪ್ರಕರಣದ ಆರೋಪಿ ಆಂಜನೇಯ ಸಾವನ್ನಪ್ಪಿದ್ದಾನೆ. ಮತ್ತೋರ್ವ ಆರೋಪಿ ಮಧು ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ನ್ಯಾಯಾಲಯಕ್ಕೆ ಹಾಜರಾಗಿದ್ದರು
ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳು ಇವತ್ತು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿದ ಬಳಿಕ ತಮ್ಮ ಊರಿಗೆ ತೆರಳಲು ಚೀಲೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಹಂದಿ ಅಣ್ಣಿ ಕೊಲೆ ಕೇಸ್, ಶರಣಾದ 8 ಆರೋಪಿಗಳ ಬಗ್ಗೆ ಶಿವಮೊಗ್ಗ ಎಸ್.ಪಿ ಹೇಳಿದ 5 ಸಂಗತಿ
ಹತ್ಯೆಯ ರಿವೇಂಜ್ ಶಂಕೆ
ಶಿವಮೊಗ್ಗದ ರೌಡಿ ಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. 2022ರ ಜುಲೈ 14ರಂದು ವಿನೋಬನಗರದ ಪೊಲೀಸ್ ಚೌಕಿ ಸರ್ಕಲ್ನಲ್ಲಿ ಹಂದಿ ಅಣ್ಣಿಯ ಬರ್ಬರ ಹತ್ಯೆಯಾಗಿತ್ತು. ಸ್ವಲ್ಪ ದೂರದವರೆಗೆ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಬಂದು ಕೊಲೆಗೈಯ್ಯಲಾಗಿತ್ತು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕೃತ್ಯ ಎಸಗಿದ್ದ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಬಂದು ವಿಚಾರಣೆ ಎದುರಿಸುತ್ತಿದ್ದಾರೆ. ಹಂದಿ ಅಣ್ಣಿ ಹತ್ಯೆಯ ರಿವೇಂಜ್ ಗಾಗಿ ಇಬ್ಬರ ಮೇಲೂ ದಾಳಿಯಾಗಿರುವ ಕುರಿತು ಶಂಕೆ ಇದೆ.
ಯಾರಿದು ಹಂದಿ ಅಣ್ಣಿ?
ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಶಿವಮೊಗ್ಗದ ರೌಡಿ ಶೀಟರ್. 2016ರವರೆಗೆ ವಿವಿಧ ರೌಡಿ ಚಟುವಟಿಕೆಯಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಆ ಬಳಿಕ ಹಂದಿ ಅಣ್ಣಿ ವೈನ್ ಶಾಪ್ ನಡೆಸಿಕೊಂಡು, ಕಟ್ಟಡವೊಂದನ್ನು ಬಾಡಿಗೆಗೆ ಕೊಟ್ಟುಕೊಂಡು ಜೀವನ ನಡೆಸುತ್ತಿದ್ದ. ಹಂದಿ ಅಣ್ಣಿ ವಿರುದ್ಧ 9 ಪ್ರಕರಣಗಳಿದ್ದವು. ಈ ಪೈಕಿ ಲವ ಕುಶ ಹತ್ಯೆ ಪ್ರಕರಣ, ನವುಲೆ ಮೋಹನ್ ಹತ್ಯೆ ಪ್ರಕರಣ ಸೇರಿ ಒಟ್ಟು ಮೂರು ಹತ್ಯೆ ಪ್ರಕರಣಗಳಿದ್ದವು. ಡಕಾಯಿತಿ, ರಾಬರಿ, ಹಲ್ಲೆ ಪ್ರಕರಣಗಳಿದ್ದವು. 2016ರಿಂದ ಈಚೆಗೆ ಹಂದಿ ಅಣ್ಣಿ ವಿರುದ್ಧ ಯಾವುದೆ ಪ್ರಕರಣ ದಾಖಲಾಗಿರಲಿಲ್ಲ.