SHIMOGA : ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇನೆ ಎಂದಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ, ಆಟೋ (Auto) ಮೇಲೆ ದಾಳಿ ಮಾಡಲಾಗಿದೆ. ಶಿವಮೊಗ್ಗದ ಸೋಮಿನಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಿಂದ ವಿಚಲಿತನಾಗಿರುವ ಆಟೋ ಚಾಲಕ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮೊರೆ ಇಟ್ಟಿದ್ದಾರೆ.
ಏನಿದು ಪ್ರಕರಣ?
ಚಾಲಕ ಹರೀಶ್ ರಾವ್ ಎಂಬುವವರು ಆಟೋ (Auto) ಚಲಾಯಿಸಿಕೊಂಡು ಬರುತ್ತಿದ್ದ ವೇಲೆ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಚುನಾವಣೆಯಲ್ಲಿ ಯಾರಿಗೆ ಮತ ಹಾಕಿದೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ವೋಟ್ ಮಾಡಿದ್ದೇನೆ ಎಂದು ಹರೀಶ್ ರಾವ್ ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆಟೋದ ಗಾಜು ಒಡೆದು, ಟಾಪ್ಗೆ ಹಾನಿ ಮಾಡಿದ್ದಾರೆ ಎಂದು ಹರೀಶ್ ರಾವ್ ಆರೋಪಿಸಿದ್ದಾರೆ.
ಈಶ್ವರಪ್ಪ ಕಾಲಿಗೆ ಬಿದ್ದ ಚಾಲಕ
ಘಟನೆ ಸಂಬಂಧ ದೂರು ನೀಡಲು ಹರೀಶ್ ರಾವ್ ತನ್ನ ಆಟೋದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಬಂದಿದ್ದರು. ಇದೆ ವೇಳೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಆಟೋ ಚಾಲಕನಿಗೆ ಎದುರಾಗಿದ್ದಾರೆ. ಆಗ ತನ್ನ ಮೇಲಾದ ಹಲ್ಲೆಯ ಕುರಿತು ಆಟೋ ಚಾಲಕ ತಿಳಿಸಿದರು. ಅಲ್ಲದೆ ರಕ್ಷಣೆ ನೀಡುವಂತೆ ಮಾಜಿ ಸಚಿವ ಈಶ್ವರಪ್ಪ ಅವರ ಕಾಲಿಗೆ ಬಿದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಸೂಕ್ತ ತನಿಖೆ, ರಕ್ಷಣೆಗೆ ಒತ್ತಾಯ
ಆಟೋ ಚಾಲಕ ಹರೀಶ್ ರಾವ್ ಅವರ ಮೇಲಿನ ಹಲ್ಲೆ ಕುರಿತು ಸೂಕ್ತ ತನಿಖೆ ನಡೆಸಬೇಕು. ಅವರಿಗೆ ರಕ್ಷಣೆ ಒದಗಿಸುವಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಸೂಚಿಸಿದರು. ಅಲ್ಲದೆ ಈಶ್ವರಪ್ಪ ಆಟೋ ಚಾಲಕನಿಗೆ 20 ಸಾವಿರ ರೂ. ನೆರವು ನೀಡಿದರು.
ಇದನ್ನೂ ಓದಿ – ಶಿವಮೊಗ್ಗದ 7 ಕ್ಷೇತ್ರದ ಚುನಾವಣೆ ಫಲಿತಾಂಶ, ತಿಳಿಯಬೇಕಾದ 5 ವಿಚಾರಗಳು ಇಲ್ಲಿವೆ