ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2020
ರಾತ್ರಿ ಮನೆ ಬಳಿ ನಿಲ್ಲಿಸಿದ್ದ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಆಟೋ ಚಾಲಕನ ಮನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ದು, ಘಟನೆ ಸಂಬಂಧ ಪೊಲೀಸರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಗಾಯ್ತು ಘಟನೆ? ಬೆಂಕಿ ಹಚ್ಚಿದ್ಯಾರು?
ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಆಟೋ ಮತ್ತು ಬೈಕ್ ಒಂದಕ್ಕೆ ಬೆಂಕಿ ಹಚ್ಚಿದ್ದಾರೆ. ಆಟೋದ ಬಹುಭಾಗ ಸುಟ್ಟು ಹೋಗಿದೆ. ಬೈಕ್ನ ಸ್ವಲ್ಪ ಭಾಗ ಹಾನಿಯಾಗಿದೆ. ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದರು.
ಆಟೋ ಮಾಲೀಕನ ಮನೆಗೆ ಮಿನಿಸ್ಟರ್
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೀಗೆಹಟ್ಟಿಗೆ ಭೇಟಿ ನೀಡಿದರು. ಆಟೋ ಮಾಲೀಕನ ಶ್ರೀನಿವಾಸ್ ಮನೆಗೆ ತೆರಳಿ, ಘಟನೆ ಸಂಬಂಧ ಮಾಹಿತಿ ಪಡೆದುಕೊಂಡರು.
ಪೊಲೀಸರ ವಿರುದ್ಧ ಮಿನಿಸ್ಟರ್ ಗರಂ
ಕಿಡಿಗೇಡಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆದರು. ಸಾರ್ವಜನಿಕರ ಎದುರಲ್ಲೇ ತರಾಟೆಗೆ ತೆಗೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕಿಡಿಗೇಡಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಕುವೆಂಪು ನಗರದಲ್ಲಿ ಮನೆಗಳಿಗೆ ನುಗ್ಗಿ ದರೋಡೆ ಮಾಡಿದ್ದಾರೆ. ವಾಹನಗಳ ಗಾಜು ಒಡೆದಿದ್ದಾರೆ. ಇತ್ತೀಚೆಗೆ ನಗರದಲ್ಲಿ ಒಂದು ಕೊಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಮಾರಾಟ ಜೋರಾಗಿದೆ. ಇದನ್ನೆಲ್ಲ ನಿಯಂತ್ರಿಸಲು ಜಿಲ್ಲಾ ರಕ್ಷಣಾಧಿಕಾರಿ ಸೇರಿ ಯಾರೆಲ್ಲ ಸರಿಯಾಗಿ ಕೆಲಸ ಮಾಡೋದಿಲ್ಲ ಅವರನ್ನು ಹೊರಗೆ ಕಳುಹಿಸಿ, ಸರಿಯಾದ ವ್ಯಕ್ತಿಗಳನ್ನು ಹಾಕಿಕೊಳ್ಳಬೇಕಾಗುತ್ತದೆ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]