SHIVAMOGGA LIVE NEWS | 24 AUGUST 2023
BENGALURU : ಮಾಜಿ ಸಂಸದ ಆಯನೂರು ಮಂಜುನಾಥ್ ಮತ್ತು ಶಿಕಾರಿಪುರದಲ್ಲಿ ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಾಗರಾಜ ಗೌಡ ಅವರು ಇವತ್ತು ಕಾಂಗ್ರೆಸ್ (Congress) ಸೇರ್ಪಡೆಯಾದರು. ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರು ನಾಯಕರನ್ನು ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸೇರಿಸಿಕೊಂಡರು.
ಆಯನೂರು ಮಂಜುನಾಥ್ ಹೇಳಿದ್ದೇನು?
ರಾಜ್ಯಾಧ್ಯಕ್ಷರು ಹೇಳಿದ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಬಡವರ ಪರವಾಗಿ ಯೋಜನೆಗಳನ್ನು ರೂಪಿಸಿದ್ದಾರೆ. ಕಾರ್ಮಿಕರ ಹೋರಾಟದ ಹಿನ್ನೆಲೆಯಿಂದ ಬಂದಿರುವ ನನಗೆ ಬಡವರ ಪರ ಯೋಜನೆ ರೂಪಿಸಿದವರ ಹಿಂದೆ ನಿಲ್ಲುವುದಕ್ಕೆ ಸಂತೋಷವಿದೆ. ಮುಂದಿನ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಸರ್ವ ಪ್ರಯತ್ನ ಮಾಡುತ್ತೇನೆ.
ನಾಗರಾಜ ಗೌಡ ಏನಂದ್ರು?
ಡಿ.ಕೆ.ಶಿವಕುಮಾರ್ ಅವರ ಹೋರಾಟದ ಫಲವಾಗಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಅವಕಾಶವಾಗಿದೆ. ಹೋರಾಟದ ದಾರಿಯಲ್ಲಿ ನಾವು ತಪ್ಪು ಮಾಡಿದಾಗ ಕರೆದು ಮಾತನಾಡಿದರು. ಇನ್ಮುಂದೆ ಇಂತಹ ತಪ್ಪು ಮಾಡಬೇಡಿ. ಪಕ್ಷ ಕಟ್ಟಬೇಕು. ಇದರಿಂದ ಎಲ್ಲರಿಗು ಅವಕಾಶವಿದೆ ಎಂದು ತಿಳಿ ಹೇಳಿದ್ದಾರೆ. ಎಲ್ಲರು ವಿಶ್ವಾಸವಿಟ್ಟು ಪಕ್ಷಕ್ಕೆ ಮತ್ತೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಮುಖಂಡರು ತೋರಿದ ದಾರಿಯಲ್ಲಿ ಪಕ್ಷದ ಸಂಘಟನೆ ಮಾಡುತ್ತೇನೆ.
ಇದನ್ನೂ ಓದಿ – ಶಿವಮೊಗ್ಗ ಕಾಂಗ್ರೆಸ್ ಕಚೇರಿ ಈಗ ಫುಲ್ ರಶ್, ಸರ್ಕಾರ ರಚನೆ ಬೆನ್ನಿಗೆ ಶುರುವಾಯ್ತು 3 ಚಾಲೆಂಜ್, ಏನೇನು?
ಡಿಕೆಶಿ ಹೇಳಿದ್ದೇನು?
ನಾವು ಯಾರನ್ನು ಖರೀದಿ ಮಾಡಬೇಕಿಲ್ಲ. ನಮ್ಮ ಪಕ್ಷದ ಸಿದ್ಧಾಂತಕ್ಕೆ ಒಪ್ಪಿ ಯಾರೆ ಬಂದರು ಸೇರಿಸಿಕೊಳ್ಳುತ್ತೇವೆ. ನಮ್ಮ ಸಿದ್ಧಾಂತ, ಕಾರ್ಯಕ್ರಮಗಳೆ ನಾಯಕರನ್ನು ಸೆಳೆಯುತ್ತಿದೆ. ಬಡವರಿಗೆ ಸಹಾಯ ಮಾಡಬೇಕು ಎಂದು ನಾಯಕರು, ಮುಖಂಡರು ಅಪೇಕ್ಷೆ ಇರುತ್ತದೆ. ಅವರಿಗೆಲ್ಲ ಅವಕಾಶ ಇದೆ. ಜಿಲ್ಲೆಯ ಹಂತದಲ್ಲಿ ಯಾರೆಲ್ಲ ನಾಯಕರಿದ್ದಾರೆ ನಮ್ಮ ಗಮನಕ್ಕೆ ತಂದರೆ ಜಿಲ್ಲಾ ನಾಯಕರ ಜೊತೆಗೆ ಮಾತನಾಡಿ ಮುಂದಿನ ನಿರ್ಧಾರ ಮಾಡೋಣ.
ಇದನ್ನೂ ಓದಿ – ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿ, ಸುದ್ದಿಗೋಷ್ಠಿಯಲ್ಲಿ ಏನೇನಲ್ಲ ಹೇಳಿದರು?
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ (Congress) ಕಾರ್ಯಧ್ಯಕ್ಷ ಸಲೀಂ ಅಹಮದ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ.ಎನ್. ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದರು.