ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜುಲೈ 2020
ಕೋವಿಡ್ ಸುರಕ್ಷಾ ಪಡೆ ನೇತೃತ್ವದಲ್ಲಿ ಶಿವಮೊಗ್ಗ ನಗರದ ನಾಲ್ಕು ಲಕ್ಷ ಜನರಿಗೆ ರೋಗ ನಿರೋಧಕ ಮತ್ತು ಶಕ್ತಿವರ್ಧಕ ಔಷಧಿ ಕಿಟ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜುಲೈ 29ರಂದು ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ಅವರು ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಡಿದ ಸಚಿವ ಈಶ್ವರಪ್ಪ, ಶಿವಮೊಗ್ಗ ನಗರದಲ್ಲಿ ಸುಮಾರು 85 ಸಾವಿರ ಮನೆಗಳಿವೆ. ಪ್ರತಿ ವಾರ್ಡ್ನ ಕಾರ್ಪೊರೇಟರ್ಗಳು, ಸ್ವಯಂ ಸೇವಕರು ಪ್ರತಿ ಮನೆಗೂ ಔಷಧಿ ಕಿಟ್ ವಿತರಿಸಲಿದ್ದಾರೆ. ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಉಚಿತ ಆರೋಗ್ಯ ಕಿಟ್ ವಿತರಿಸಲಾಗುತ್ತದೆ ಎಂದರು.
ಔಷಧಿ ಕಿಟ್ನಲ್ಲಿ ಏನೇನಿರುತ್ತೆ?
ಆಯುಷ್ ಇಲಾಖೆ ಮಾರ್ಗಸೂಚಿಯಂತೆ ಔಷಧಿ ಕಿಟ್ ಸಿದ್ಧಪಡಿಸಿಲಾಗುತ್ತಿದೆ. ಸಂಶಮನಿವಟಿ 60 ಮಾತ್ರೆ, ಆಯುರ್ವೇದ ಕ್ವಾಥಾಚೂರ್ಣ 100 ಗ್ರಾಂ, ಆರ್ಸೆನಿಕಮ್ ಆಲ್ಬಮ್ 30 ಸತ್ವದ 10 ಮಾತ್ರೆಗಳ ಒಂದು ಸ್ಟ್ರಿಪ್ ನೀಡಲಾಗುತ್ತದೆ ಎಂದು ತಿಳಿಸಿದರು.
ಆಧಾರ್ ಕಾರ್ಡ್ ಇದ್ದವರಿಗಷ್ಟೇ
ಕಿಟ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಆಧಾರ್ ಕಾರ್ಡ್ ತೋರಿಸಿದರೆ ಔಷಧಿ ಕಿಟ್ ವಿತರಿಸಲಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಅವರಿಗೆ ಕಾರ್ಡ್ ಮಾಡಿಸಿ, ಬಳಿಕ ಕಿಟ್ ನೀಡಲಾಗುತ್ತದೆ ಎಂದರು.
ಅವರ ಮನೆಗೂ ಔಷಧಿ ತಲುಪಿಸೋಣ..!
ಇವತ್ತು ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಶಾಸಕ ಪ್ರಸನ್ನಕುಮಾರ್, ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸಚಿವ ಈಶ್ವರಪ್ಪ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಅವರ ಮನೆಗೂ ಔಷಧಿ ತಲುಪಿಸೋಣ ಬಿಡಿ ಎಂದು ತಿರುಗೇಟು ನೀಡಿದರು.
ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಈ.ಕಾಂತೇಶ್ ಸೇರಿದಂತೆ ಹಲವರು ಸುದ್ದಿಗೋಷ್ಟಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]