SHIVAMOGGA LIVE NEWS | 6 SEPTEMBER 2023
SHIMOGA : ಭದ್ರಾ ಜಲಾಶಯದಿಂದ (Bhadra Dam) ನೀರು ಹರಿಸುವ ವಿಚಾರ ಕುರಿತು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನೀರು ನಿರ್ವಹಣಾ ಸಲಹಾ ಸಮಿತಿ ಸಭೆ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.
ಯಾರೆಲ್ಲ ಭಾಗಿಯಾಗಿದ್ದಾರೆ?
ಸಭೆಯಲ್ಲಿ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಕೆಲ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು, ಉಪ ವಿಭಾಗಾಧಿಕಾರಿಗಳು, ರೈತ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದಾರೆ.
ಮೂರು ಜಿಲ್ಲೆಯ ರೈತರ ನಿರೀಕ್ಷೆ
ಮುಂಗಾರ ಹಂಗಾಮಿಗೆ ಭದ್ರಾ ಜಲಾಶಯದಿಂದ 100 ದಿನ ನೀರು ಹರಿಸಲಾಗುತ್ತಿದೆ. ಈಗ ನೀರು ಹರಿಸಿದರೆ ಬೇಸಿಗೆ ಹಂಗಾಮಿಗೆ ನೀರು ಉಳಿಯುವುದಿಲ್ಲ. ಇದರಿಂದ ಅಚ್ಚಕಟ್ಟು ಪ್ರದೇಶದ ರೈತರಿಗೆ ಸಮಸ್ಯೆ ಆಗಲಿದೆ. ನೀರು ಹರಿಸುವುದನ್ನು ಕೂಡಲೆ ನಿಲ್ಲಿಸಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ದಾವಣಗೆರೆ ಭಾಗದ ರೈತರು ನೀರು ನಿಲ್ಲಿಸದಂತೆ ಆಗ್ರಹಿಸುತ್ತಿದ್ದಾರೆ. ವಿವಾದದ ಹಿನ್ನೆಲೆ ಅಚ್ಚುಕಟ್ಟು ಅಚ್ಚುಕಟ್ಟು ಪ್ರಾಧಿಕಾರದ ನೀರು ನಿರ್ವಹಣೆ ಸಲಹಾ ಸಮಿತಿ ಸಭೆ ಆಯೋಜಿಸಲಾಗಿದೆ. ಸಭೆಯ ನಿರ್ಧಾರದತ್ತ ಮೂರು ಜಿಲ್ಲೆಯ ರೈತರು ಚಿತ್ತ ನೆಟ್ಟಿದ್ದಾರೆ.
ಕಾಡಾ ಕಚೇರಿ ಮುಂದೆ ಹೋರಾಟ
ಇನ್ನು, ಸಭೆ ಹಿನ್ನೆಲೆ ಭದ್ರಾ ಕಾಡಾ ಕಚೇರಿ ಮುಂಭಾಗ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದ್ದರಿಂದ ಕಾಡಾ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.