SHIVAMOGGA LIVE NEWS | 5 JANUARY 2024
SHIMOGA : ಹುಬ್ಬಳ್ಳಿಯಲ್ಲಿ ಬಂಧಿಸಿರುವ ಕರ ಸೇವಕನ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಮುಖಂಡರನ್ನು ಬಂಧಿಸಲಾಯಿತು.
ಪ್ರತಿಭಟನೆಗೆ ಕಾರಣವೇನು?
ಕರ ಸೇವಕ, ಹುಬ್ಬಳ್ಳಿಯ ಆಟೋ ಚಾಲಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಿವಮೊಗ್ಗ ಬಿಜೆಪಿ ವತಿಯಿಂದ ಬಸ್ ನಿಲ್ದಾಣ ಸಮೀಪ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ರಾಮನಾಮ ಜಪ, ಭಜನೆ ಮಾಡಿದರು.
ಎಸ್.ಪಿ ಕಚೇರಿ ಮುತ್ತಿಗೆ ಯತ್ನ
ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಕೊನೆಗೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಸಾಗರ ರಸ್ತೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದರು. ಮುತ್ತಿಗೆ ಯತ್ನದ ಸಂದರ್ಭ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂ.ಬಿ.ಭಾನುಪ್ರಕಾಶ್ ಸೇರಿ ಹಲವರನ್ನು ಬಂಧಿಸಿ ಕೆಲ ಸಮಯದ ಬಳಿಕ ಬಿಡುಗಡೆ ಮಾಡಲಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸ್ ಕಚೇರಿ ಮುಂಭಾಗ ಶ್ರೀರಾಮ ನಾಮ ಜಪಿಸಿ, ಭಜನೆ ಮಾಡಿದರು.
ಇದನ್ನೂ ಓದಿ – ಸಿಗಂದೂರು ಜಾತ್ರೆಗೆ ದಿನಾಂಕ ನಿಗದಿ, ಏನೆಲ್ಲ ಕಾರ್ಯಕ್ರಮ ಇರಲಿದೆ? ಯಾರೆಲ್ಲ ಭಾಗವಹಿಸ್ತಾರೆ?
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಚನ್ನಬಸಪ್ಪ, ಎಸ್.ರುದ್ರೇಗೌಡ, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಭಾನುಪ್ರಕಾಶ್, ಗಿರೀಶ್ ಪಟೇಲ್, ಜಗದೀಶ್ ಸೇರಿದಂತೆ ಹಲವರು ಇದ್ದರು.