ಶಿವಮೊಗ್ಗದ ಲೈವ್.ಕಾಂ | SAGARA NEWS | 3 ಫೆಬ್ರವರಿ 2022
ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ರಾಜಕೀಯ ಜಿದ್ದಾಜಿದ್ದಿ ಈಗ ಆಣೆ ಪ್ರಮಾಣ ಹಂತಕ್ಕೆ ತಲುಪಿದೆ. ಇದಕ್ಕೆ ದಿನಾಂಕವೂ ನಿಗದಿಯಾಗಿದೆ.
ಏನಿದು ಆಣೆ ಪ್ರಮಾಣ?
ಮರಳು ಸಾಗಣೆ ವಿಚಾರವಾಗಿ ಮುಂಚಿನಿಂದಲೂ ಹಾಲಿ ಮತ್ತು ಮಾಜಿ ಶಾಸಕರು, ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಈಗ ಇದು ಆಣೆ ಪ್ರಮಾಣದವರೆಗೆ ಬಂದು ನಿಂತಿದೆ. ಮರಳು ಸಾಗಣೆದಾರರಿಂದ ಶಾಸಕ ಹರತಾಳು ಹಾಲಪ್ಪ ಹಣ ಪಡೆದಿದ್ದಾರೆ ಎಂದು ಇತ್ತೀಚೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದರು. ಅಲ್ಲದೆ ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದರು.
ಶಾಸಕರಿಂದ ಸಾವಲಿಗೆ ಸವಾಲು
ಸಾಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಹರತಾಳು ಹಾಲಪ್ಪ, ಮರಳು ಸಾಗಣೆದಾರರಿಂದ ತಾವು ಮತ್ತು ತಮ್ಮ ಕುಟುಂಬ ನಯಾಪೈಸೆ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧವಿದ್ದೇನೆ. ಫೆಬ್ರವರಿ 13ರಂದು ಮಂಜುನಾಥೇಶ್ವರನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ. ಅಲ್ಲದೆ ಬೇಳೂರು ಗೋಪಾಲಕೃಷ್ಣ ಅವರು ಶಾಸಕರಾಗಿದ್ದ ಸಂದರ್ಭ ಇನ್ಸ್’ಪೆಕ್ಟರ್ ಒಬ್ಬರನ್ನು ಮುಂದಿಟ್ಟುಕೊಂಡು ಕಮಿಷನ್ ಪಡೆದು ಅಭ್ಯಾಸವಾಗಿದೆ. ಶಾಸಕರಾಗಿದ್ದಾಗ ಅವರು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ಆಣೆ ಪ್ರಮಾಣ ರಾಜಕೀಯ, ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.