ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಸೆಪ್ಟೆಂಬರ್ 2021
ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡು, ಹುಂಡಿಗೆ ಕಾಣಿಕೆ ಅರ್ಪಿಸುವ ಭಕ್ತರಿದ್ದಾರೆ. ಈ ಮಧ್ಯೆ ಒಬ್ಬಾತ ಹುಂಡಿಗೆ ಚೂಯಿಂಗಮ್ ಅಂಟಿಸಿದ ಕೋಲು ಹಾಕಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರಿಗೆ ಹಿಡಿದು ಕೊಡಲಾಗಿದೆ. ಇನ್ನು, ಈತನ ಕುಕೃತ್ಯ ಈಗ ತೀರ್ಥಹಳ್ಳಿ ತಾಲೂಕಿನ ದೇವಸ್ಥಾನಗಳ ಆಡಳಿತ ಮಂಡಳಿ ನಿದ್ದೆಗೆಡಿಸಿದೆ.
ಭದ್ರಾವತಿ ತಾಲೂಕು ಬಾರಂದೂರಿನ ವಸಂತ ಕುಮಾರ್ (36) ಬಂಧಿತ. ತೀರ್ಥಹಳ್ಳಿ ತಾಲೂಕು ಮಹಿಷಿಯ ಅಶ್ವತ್ಥ ನಾರಾಯಣ ದೇವಸ್ಥಾನದ ಹುಂಡಿಗೆ ಚೂಯಿಂಗಮ್ ಅಂಟಿಸಿದ ಕೋಲು ಹಾಕಿ ಸಿಕ್ಕಿಬಿದ್ದಿದ್ದಾನೆ.
ಏನಿದು ಚೂಯಿಂಗಮ್ ತಂತ್ರ
ದೇವಸ್ಥಾನದ ಹುಂಡಿಯಲ್ಲಿರುವ ಹಣವನ್ನು ಕಳವು ಮಾಡಲು ವಸಂತ ಕುಮಾರ್ ಚೂಯಿಂಗಮ್ ತಂತ್ರ ಮಾಡಿದ್ದ. ಕೋಲಿನ ತುದಿಗೆ ಚೂಯಿಂಗಮ್ ಅಂಟಿಸಿ ಅದನ್ನು ಹುಂಡಿಯೊಳಗೆ ಇಳಿಸಿ ನೋಟುಗಳನ್ನು ಕದಿಯುತ್ತಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?
ಬಾರಂದೂರಿನ ವಸಂತ ಕುಮಾರ್ ಮಹಿಷಿಯ ಅಶ್ವತ್ಥ ನಾರಾಯಣ ದೇವಸ್ಥಾನಕ್ಕೆ ಆಗಾಗ ಬರುತ್ತಿದ್ದ. ಸುತ್ತಮುತ್ತಲ ಜನರಿಗೆ ಈತ ಅಪರಿಚಿತನಾಗಿದ್ದ. ಅಲ್ಲದೆ ಯಾರೂ ಇಲ್ಲದ ವೇಳೆಯಲ್ಲಿ ದೇಗುಲ ಪ್ರವೇಶಿಸುತ್ತಿದ್ದ. ಇದು ಅನುಮಾನಕ್ಕೆ ಪ್ರಮುಖ ಕಾರಣವಾಗಿತ್ತು. ಇನ್ನು, ದೇವಸ್ಥಾನದಲ್ಲಿ ಹುಂಡಿ ಹಣ ಕಳವಾಗುತ್ತಿರುವ ಬಗ್ಗೆ ಆಡಳಿತ ಮಂಡಳಿಗೆ ಅನುಮಾನವಿತ್ತು. ಹಾಗಾಗಿ ಸಿಸಿಟಿವಿ ಮೂಲಕ ನಿಗಾ ವಹಿಸಲಾಗಿತ್ತು.
ಚೂಯಿಂಗಮ್ ಸಹಿತ ಸಿಕ್ಕಿಬಿದ್ದ
ಮಹಿಷಿ ದೇವಸ್ಥಾನದ ಹುಂಡಿಯಲ್ಲಿ ಚೂಯಿಂಗಮ್ ಇಳಿಸಿ ಹಣ ಕದಿಯುತ್ತಿದ್ದಾಗಲೇ ವಸಂತಕುಮಾರ್ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿಯಲ್ಲಿ ಈತನ ಕೃತ್ಯ ಗಮನಿಸಿದ ಆಡಳಿತ ಮಂಡಳಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ತಾಲೂಕಿನಾದ್ಯಂತ ಇತರೆ ದೇವಸ್ಥಾನದ ಅಡಳಿತ ಮಂಡಳಿಯ ನಿದ್ದೆಗೆಡಿಸಿದೆ. ಈಗ ಪ್ರತಿಯೊಬ್ಬರು ಹುಂಡಿ ಬಳಿಗೆ ಬರುವ ಭಕ್ತರ ಮೇಲೆ ನಿಗಾ ವಹಿಸುವಂತಾಗಿದೆ.
ವಸಂತ ಕುಮಾರನನ್ನು ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200