ಶಿವಮೊಗ್ಗ ಲೈವ್.ಕಾಂ | BHADRAVATHI NEWS | 1 MARCH 2021
ಕಬಡ್ಡಿ ಪಂದ್ಯಾವಳಿ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಹಲ್ಲೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏನಿದು ಕಿರಿಕ್? ಯಾಕಾಯ್ತು ಗಲಾಟೆ?
ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಎರಡು ದಿನದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಲ್ನಾಡ್ ವಾರಿಯಾರ್ಸ್ ಮತ್ತು ಸ್ಟೀಲ್ ಟೈಮ್ ತಂಡಗಳ ನಡುವೆ ರಾತ್ರಿ ಫೈನಲ್ ಪಂದ್ಯಾವಳಿ ನಡೆಯಿತು. ಮಲ್ನಾಡ್ ವಾರಿಯರ್ಸ್ ತಂಡ ಗೆಲುವು ಸಾಧಿಸಿದೆ. ಸಂಭ್ರಮಾಚರಣೆ ನಡೆಯುತ್ತಿದ್ದ ಸಂದರ್ಭ ಘೋಷಣೆ ಕೂಗಲಾಯಿತು. ಈ ವೇಳೆ ವಾಗ್ವಾದ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಜೈ ಶ್ರೀರಾಮ್ ಘೋಷಣೆಗೆ ಹಲ್ಲೆ
ಸ್ಟೀಲ್ ಟೈಮ್ ತಂಡದ ಪರವಾಗಿದ್ದ ಯುವಕನೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ, ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಬರಹಗಳನು ಪ್ರಕಟವಾಗಿದೆ.
ಯಾರ ಮೇಲೆ ಹಲ್ಲೆಯಾಗಿದೆ?
ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ಮಂಡಲ ಅಧ್ಯಕ್ಷ ಪ್ರಭಾಕರ್, ಯುವ ಮೋರ್ಚಾ ಕಾರ್ಯಕರ್ತರಾದ ನಕುಲ್, ಧನುಷ್, ಬಜರಂಗದಳ ಕಾರ್ಯಕರ್ತ ಸುನಿಲ್, ಮಹಾಂತೇಶ್ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕರು ಗರಂ, ಪ್ರತಿಭಟನೆಯ ಎಚ್ಚರಿಕೆ
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಸಂಗಮೇಶ್ವರ್ ಅವರು, ಕಬಡ್ಡಿ ಪಂದ್ಯಾವಳಿ ಜನ ಮೆಚ್ಚುಗೆ ಗಳಿಸಿದೆ. ಇದನ್ನು ಸಹಿಸಿಕೊಳ್ಳಲು ಆಗದೆ ಕೋಮುವಾದಿಗಳು ಅಶಾಂತಿ ಮೂಡಿಸುತ್ತಿದ್ದಾರೆ. ಇವರನ್ನು ಕೂಡಲೆ ಬಂಧಿಸಬೇಕು. ಇಲ್ಲವಾದಲ್ಲಿ ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭದ್ರಾವತಿ ಓಲ್ಡ್ ಟೌನ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]