SHIVAMOGGA LIVE NEWS | 8 AUGUST 2023
SHIMOGA : ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ (Shakthi Yojane) ಜಾರಿಯಾಗಿ ಎರಡು ತಿಂಗಳು ಕಳೆದಿದೆ. ಯೋಜನೆ ಕುರಿತು ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ನಿಯೋಗ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಭೇಟಿ ನೀಡಿತ್ತು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿವಿಧ ಬಸ್ಸುಗಳಲ್ಲಿ ಮಹಿಳೆಯರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಜಿಲ್ಲಾಧ್ಯಕ್ಷ ಸುಂದರೇಶ್ ಅವರು ಬಸ್ಸಿನಲ್ಲಿದ್ದ ಮಹಿಳೆಯರ ಬಳಿ ತೆರಳಿ ಶಕ್ತಿ ಯೋಜನೆಯಿಂದ ಅನುಕೂಲವಾಗುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿದರು. ಯೋಜನೆ ಕುರಿತು ಮಹಿಳೆಯರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
‘ವಿದ್ಯಾರ್ಥಿಗಳಿಗೆ ಬಸ್ ಸಿಕ್ತಿಲ್ಲ’
ಪರಿಶೀಲನೆ ವೇಳೆ ರೈತರೊಬ್ಬರು ‘ಶಕ್ತಿ ಯೋಜನೆ (Shakthi Yojane) ಜಾರಿಯಾದಾಗಿನಿಂದ ವಿದ್ಯಾರ್ಥಿಗಳಿಗೆ ಬಸ್ ಸಿಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕುʼ ಎಂದು ಆಗ್ರಹಿಸಿದರು. ಡಿಪೋ ಮ್ಯಾನೇಜರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಸೂಕ್ತ ಬಸ್ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸೂಚಿಸಿದರು. ‘ಬಸ್ಗಳ ಲಭ್ಯತೆ ಆಧಾರದಲ್ಲಿ ಅಗತ್ಯವಿದ್ದಲ್ಲಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವುದಾಗಿ’ ಅಧಿಕಾರಿ ತಿಳಿಸಿದರು.
ಉತ್ತಮ ಸ್ಪಂದನೆ, ಲಾಭದತ್ತ ಸಾರಿಗೆ ಇಲಾಖೆ
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳ ಪೈಕಿ ಮೊದಲು ಶಕ್ತಿ ಯೋಜನೆಗೆ ಜಾರಿಗೆ ತರಲಾಯಿತು. ಇದಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮಹಿಳೆಯರು ಯೋಜನೆ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ – ವೆರೈಟಿ ಡ್ರೆಸ್, ಬಗೆಬಗೆ ಸ್ಟೈಲ್, ಶಿವಮೊಗ್ಗದಲ್ಲಿ ಜೋರಿತ್ತು ವಿಜ್ಞಾನ ವಿದ್ಯಾರ್ಥಿಗಳ ಟ್ರೆಡೀಷನಲ್ ಡೇ ಸೆಲಬ್ರೇಷನ್
ಬಿಜೆಪಿ ಮತ್ತು ವಿರೋಧ ಪಕ್ಷದವರು ಶಕ್ತಿ ಯೋಜನೆ ಕುರಿತು ಅಪಪ್ರಚಾರ ಮಾಡಿದ್ದರು. ಯೋಜನೆ ಜಾರಿಯಿಂದ ಕೆಎಸ್ಆರ್ಟಿಸಿ ನಷ್ಟ ಅನುಭವಿಸಲಿದೆ ಎಂದು ತಿಳಿಸಿದ್ದರು. ಈಗ ಸಾರಿಗೆ ನಿಗಮಕ್ಕೆ ಲಾಭವಾಗಿದೆ. ಎಲ್ಲ ಬಸ್ಸುಗಳು ಭರ್ತಿಯಾಗಿ ಸಾಗುತ್ತಿವೆ. ವಿದ್ಯಾರ್ಥಿಗಳಿಗೆ ಬಸ್ ಸಿಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಲವರು ಪ್ರಮುಖರು, ಕಾರ್ಯಕರ್ತರು ಈ ವೇಳೆ ಇದ್ದರು.