ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 5 JUNE 2021
ಲಾಕ್ ಡೌನ್ ಅವಧಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕರೋನಾ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಆರಗ ಜ್ಞಾನೇಂದ್ರ, ಅಬಕಾರಿ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದೇನು?
ತೀರ್ಥಹಳ್ಳಿಯ ಹಳ್ಳಿ ಹಳ್ಳಿಗೆ ದಿನಸಿ, ತರಕಾರಿ ತಲುಪಲು ಸಾದ್ಯವಾಗುತ್ತಿಲ್ಲ. ಆದರೆ ಮದ್ಯ ಮಾತ್ರ ಎಲ್ಲಡೆ ಅಕ್ರಮವಾಗಿ ಸಿಗುತ್ತಿದೆ. ಹೆಣ್ಣುಮಕ್ಕಳು ಹಗಲು ರಾತ್ರಿ ಕರೆ ಮಾಡಿ ನಮ್ಮನೆ ಮಾಂಗಲ್ಯ ಹೋಯ್ತು, ಗಂಡ ತೀರಿಕೊಂಡ ಅಂತಾ ಗೋಳಾಡುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ದಾಳಿ ಮಾಡಿ ಲೀಟರ್ಗಟ್ಟಲೆ ಮದ್ಯ ವಶಕ್ಕೆ ಪಡೆಯುತ್ತಿರುವ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮದ್ಯದಂಗಡಿ ಮಾಲೀಕರ ವಿರುದ್ಧ ಕೇಸ್ ಹಾಕುತ್ತಿಲ್ಲ. ವಶಕ್ಕೆ ಪಡೆದ ಮದ್ಯದ ಬ್ಯಾಚ್ ಪರಿಶೀಲಿಸಿ ಮದ್ಯದಂಗಡಿ ವಿರುದ್ಧ ಕೇಸ್ ಹಾಕುತ್ತಿಲ್ಲ ಎಂದು ಆರೋಪಿಸಿದರು.
ಅಕ್ರಮ ಮದ್ಯ ಮಾರಾಟದಿಂದ ತೀರ್ಥಹಳ್ಳಿಯಲ್ಲಿ ಕರೋನ ಪ್ರಕರಣಗಳು ಹೆಚ್ಚುತ್ತಿವೆ. ಈ ಅಕ್ರಮಕ್ಕೆ ತಡೆಯೊಡ್ಡಲು ಆಗದಿದ್ದರೆ ಗೌರವಯುತವಾಗಿ ವರ್ಗಾವಣೆ ಪಡೆದುಕೊಂಡು ಹೋಗಿ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.
ಮದ್ಯದಂಗಡಿಯವರ ಜೊತೆಗೆ ಅಬಕಾರಿ ಇಲಾಖೆ, ಪೊಲೀಸರು ಶಾಮೀಲಾಗಿದ್ದಾರೆ. ಹಾಗಾಗಿಯೇ ಮದ್ಯದಂಗಡಿಯವರ ವಿರುದ್ಧ ಕೇಸ್ ಹಾಕುತ್ತಿಲ್ಲ. ಲೀಟರ್ ಗಟ್ಟಲೆ ಮದ್ಯ ಹಳ್ಳಿ ಹಳ್ಳಿಗೆ ತಲುಪಲು ಮದ್ಯದಂಗಡಿಯವರೆ ಕಾರಣ ಎಂದು ಆಪಾದಿಸಿದರು.
ಹಿರಿಯ ಅಧಿಕಾರಿಗಳಿಗೆ ಫೋನ್
ಸಭೆ ವೇಳೆಯಲ್ಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ ಅವರಿಗೆ ಕರೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಿಎಂ ಭೇಟಿ, ದೂರು
ಇದೆ ವೇಳೆ ಜೂನ್ 9ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗುವುದಾಗಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು. ಸಿಎಂ ಭೇಟಿ ವೇಳೆ ಅಕ್ರಮ ಮದ್ಯ ಮಾರಾಟ ದಂಧೆ ವಿರುದ್ಧ ದೂರು ನೀಡುವುದಾಗಿ ಎಚ್ಚರಿಸಿದರು.
ಇನ್ಮುಂದೆ ಕರೋನ ಪರೀಕ್ಷೆಗೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]