ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಹಳೇ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ನರಸಿಂಹ ಎಂಬಾತನ ಕೊಲೆ ನಡೆದಿದೆ. ಆರೋಪಿಗಳ ಪತ್ತೆಗಾಗಿ ಮೂರು ಪ್ರತ್ಯೇಕ ಪೊಲೀಸ್ ತಂಡ ರಚಿಸಲಾಗಿದೆ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ತಿಳಿಸಿದ್ದಾರೆ.
ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶುಕ್ರವಾರ ಸಂಜೆ 4:45ರ ವೇಳೆಗೆ ಎದುರಾಳಿ ಗ್ಯಾಂಗ್ನವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನರಸಿಂಹನ ಕೊಲೆ ಮಾಡಿದ್ದಾರೆ. ಮೃತನ ಪತ್ನಿ ಸ್ನೇಹ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಳೇ ಗ್ಯಾಂಗ್ ವೈಷಮ್ಯದ ಹಿನ್ನೆಲೆ ಅಂಬು ಮತ್ತು ಆತನ ತಂಡದವರು ಕೃತ್ಯ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ’ ಎಂದರು.

‘ಕೊಲೆಯಾದ ನರಸಿಂಹನ ವಿರುದ್ಧ ತುಂಗಾನಗರ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ದೊಡ್ಡಪೇಟೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ ಯತ್ನ, ಜೂಜಾಟ ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣಗಳ ಪ್ರತೀಕಾರವಾಗಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಎ.ಜಿ.ಕಾರಿಯಪ್ಪ ಅವರು ಮಾಹಿತಿ ನೀಡಿದರು.

ಆರೋಪಿಗಳು ಶೀಘ್ರ ಪತ್ತೆ
ಇನ್ನು, ಆರೋಪಿ ಅನಿಲ್ ಅಲಿಯಾಸ್ ಅಂಬು ಮತ್ತು ಪ್ರಕರಣದಲ್ಲಿ ಭಾಗಿಯಾದವರನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬರ್ಬರ ಹತ್ಯೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.