ಪಾರ್ಟಿಗೆ ಕರೆದು MBBS ವಿದ್ಯಾರ್ಥಿಗೆ ಬಿಯರ್‌ ಬಾಟಲಿಯಿಂದ ಹೊಡೆದು ರೂಮಿನಲ್ಲಿ ಕೂಡಿ ಹಾಕಿದರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಹೋಟೆಲ್‌ನಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಕರೆದೊಯ್ದು, ವೈದ್ಯಕೀಯ ಇಂಟರ್ನ್‌ಶಿಪ್ ಮಾಡುತ್ತಿರುವ ಯುವಕನ ಮೇಲೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು, ರೂಮ್‌ನಲ್ಲಿ ಕೂಡಿಹಾಕಿದ್ದ ಘಟನೆ ನಡೆದಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ಎಂಬಿಬಿಎಸ್ ಇಂಟರ್ನ್‌ಶಿಪ್ ಮಾಡುತ್ತಿರುವ ಯುವಕನೊಬ್ಬ ಜುಲೈ 12ರ ಮಧ್ಯಾಹ್ನ ತನ್ನ ಸ್ನೇಹಿತನೊಂದಿಗೆ ಕುವೆಂಪು ರಸ್ತೆಯ ಬಾರ್‌ಗೆ ಹೋಗಿದ್ದರು. ಈ ವೇಳೆ ಪಕ್ಕದ ಟೇಬಲ್‌ನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಮೂವರು ಯುವಕರು ಇವರನ್ನು ಪರಿಚಯ ಮಾಡಿಕೊಂಡು, ಸಾಗರ ರಸ್ತೆಯ ಮಾಯಾ ಹೋಟೆಲ್‌ನಲ್ಲಿ ಪಾರ್ಟಿ ಇದೆ ಎಂದು ಆಹ್ವಾನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Doddapete-Police-Station-Shimoga

ಬೆಳಗಿನ ಜಾವ ಹೊಟೇಲ್‌ ರೂಂಗೆ ಹೋಗಿದ್ದರು

ಬೆಳಗಿನ ಜಾವ 1 ಗಂಟೆಗೆ ಯುವಕ ತನ್ನ ಸ್ನೇಹಿತನೊಂದಿಗೆ ಶಿವಮೊಗ್ಗದ ಸಾಗರ ರಸ್ತೆಯ ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ಮೂವರು ಯುವಕರು ತಮ್ಮ ಹೆಸರನ್ನು ವರ್ಗಿಸ್, ಅಭಿಷೇಕ್ ಮತ್ತು ಸುನೀಲ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಎಂಬಿಬಿಎಸ್‌ ಇಂಟರ್ನ್‌ಶಿಪ್‌ ಯುವಕನ ಸ್ನೇಹಿತ ಅಲ್ಲಿಂದ ತೆರಳಿದ್ದರು. ನಂತರ ಉಳಿದವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ ಎಂದು ಆರೋಪಿಸಲಾಗಿದೆ.

ಈ ವೇಳೆ ಆರೋಪಿಗಳು ಎಂಬಿಬಿಎಸ್‌ ಇಂಟರ್ನ್‌ಶಿಪ್‌ ಯುವಕನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಮುಖಕ್ಕೆ ಹೊಡೆದಿದ್ದಾರೆ. ಒಬ್ಬಾತ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ಗಾಯಾಳು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಅದೇ ಹೋಟೆಲ್ ರೂಮ್‌ನಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವಕನ ಸ್ನೇಹಿತರು ಹೋಟೆಲ್‌ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!