ಶಿವಮೊಗ್ಗ : ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳ ವಿಚಾರಣೆ ಹಿನ್ನೆಲೆ ಇವತ್ತು ಶಿವಮೊಗ್ಗ ನ್ಯಾಯಾಲಯದ (court) ಸುತ್ತಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಡ್ರೋಣ್ ಕ್ಯಾಮರಾಗಳ ಮೂಲಕ ಪೊಲೀಸರು ಕಣ್ಣಾವಲು ನೆಟ್ಟಿದ್ದರು.
ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳಾದ ಮಧು, ಮಧುಸೂದನ್, ಮದನ್ ರಾಯ್, ಫಾರೂಖ್, ಚಂದನ್ ಇವತ್ತು ವಿಚಾರಣೆಗೆ ಹಾಜರಾಗಿದ್ದರು.
ಕೋರ್ಟ್ ಸುತ್ತಮುತ್ತ ಬಿಗಿ ಭದ್ರತೆ
ಆರೋಪಿಗಳು ವಿಚಾರಣೆಗೆ ಹಾಜರಾದ ಹಿನ್ನೆಲೆ ಶಿವಮೊಗ್ಗ ನ್ಯಾಯಾಲಯದ (Court) ಸುತ್ತಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಯನಗರ, ವಿನೋಬಗರ ಠಾಣೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಇನ್ನು, ಕೋರ್ಟ್ ಆವರಣದಲ್ಲಿ ಎರಡು ಡ್ರೋಣ್ ಕ್ಯಾಮರಾಗಳನ್ನು ಹಾರಿಸಿ, ಜನ ಸಂಚಾರದ ಮೇಲೆ ನಿಗಾ ವಹಿಸಿದ್ದರು.


ಬಿಗಿ ಭದ್ರತೆಗೆ ಕಾರಣವೇನು?
» ಕಾರಣ 1
ಹಂದಿ ಅಣ್ಣಿ ಹತ್ಯೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಪ್ರಮುಖ ಆರೋಪಿಗಳಾದ ಆಂಜನೇಯ ಮತ್ತು ಮಧು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ 2023ರ ಮಾರ್ಚ್ 15ರಂದು ತಮ್ಮ ಊರು ಭಾನುವಳ್ಳಿಗೆ ಬೈಕಿನಲ್ಲಿ ತೆರಳುತ್ತಿದ್ದರು. ನ್ಯಾಮತಿ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿ ಬಂದ ಗುಂಪೊಂದು ಬೈಕ್ಗೆ ಡಿಕ್ಕಿ ಹೊಡೆಸಿತ್ತು. ಘಟನೆಯಲ್ಲಿ ಆಂಜನೇಯ (30) ಸ್ಥಳದಲ್ಲೆ ಸಾವನ್ನಪ್ಪಿದ್ದ. ಮಧು (28) ಗಂಭೀರ ಗಾಯಗೊಂಡಿದ್ದ.
» ಕಾರಣ 2
ಹಂದಿ ಅಣ್ಣಿ ಹತ್ಯೆ ಆರೋಪಿಗಳ ಪೈಕಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಐವರು ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯದ ಆವರಣದಲ್ಲಿಯೆ ಅವರ ಮೇಲೆ ದಾಳಿಯಾಗುವ ಸಾಧ್ಯತೆ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
» ಕಾರಣ 3
ಹತ್ಯೆ ಪ್ರಕರಣದ ಸಾಕ್ಷಿಗಳು ಇವತ್ತು ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಸಾಕ್ಷಿಗಳ ಮೇಲೆ ಪ್ರಭಾವ ಅಥವಾ ಬೆದರಿಕೆ ಒಡ್ಡುವ ಸಾಧ್ಯತೆ ಇತ್ತು. ಹಾಗಾಗಿ ಬಂದೋಬಸ್ತ್ ಹೆಚ್ಚಳ ಮಾಡಲಾಗಿತ್ತು.
ನಡು ಬೀದಿಯಲ್ಲೇ ಅಟ್ಟಾಡಿಸಿ ಕೊಂದಿದ್ದರು
2022ರ ಜುಲೈ 14ರಂದು ವಿನೋಬನಗರದ ಪೊಲೀಸ್ ಚೌಕಿ ಸರ್ಕಲ್ನಲ್ಲಿ ಹಂದಿ ಅಣ್ಣಿಯನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ » ಸಕ್ರೆಬೈಲು ಸಮೀಪ ಓರ್ವ ಮಹಿಳೆ, ಇಬ್ಬರು ಪುರುಷರ ಮೃತದೇಹ ಪತ್ತೆ, ಸ್ಥಳಕ್ಕೆ ಪೊಲೀಸ್ ದೌಡು
