SHIVAMOGGA LIVE NEWS | 16 MARCH 2023
SHIMOGA : ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಯ ಕೊಲೆ ಕೇಸ್ ಸಂಬಂಧ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ (surrender). ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ದಾವಣಗೆರೆ ಜಿಲ್ಲೆ ಚೀಲೂರಿನ ಗೋವಿನಕೋವಿಯಲ್ಲಿ ಆಂಜನೇಯ (28) ಮತ್ತು ಮಧು (27) ಎಂಬುವವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಘಟನೆಯಲ್ಲಿ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಧು ಗಂಭೀರವಾಗಿ ಗಾಯಗೊಂಡಿದ್ದ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾಲ್ವರು ಪೊಲೀಸರಿಗೆ ಶರಣು
ದಾಳಿ ಪ್ರಕರಣದ ಪ್ರಮುಖ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ (surrender). ಸುನಿಲ್ ಅಲಿಯಾಸ್ ತಮಿಳು ಸುನಿಲ್, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಎಂಬುವವರು ಪೊಲೀಸರಿಗೆ ಶರಣಾಗಿದ್ದಾರೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ದಾವಣಗೆರೆ ಪೊಲೀಸರಿಗೆ ಒಪ್ಪಿಸಲಾಗುತ್ತದೆ.
ಅಣ್ಣಿ ಹತ್ಯೆಯಂತೆಯೇ ಹತ್ಯೆ, ಶರಣಾಗತಿ
ಶಿವಮೊಗ್ಗದ 100 ಅಡಿ ರಸ್ತೆಯಲ್ಲಿ ಹಂದಿ ಅಣ್ಣಿಯ ಬೈಕಿಗೆ ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದ ಎಂಟು ಆರೋಪಿಗಳು, ಆತನನ್ನು ಸ್ವಲ್ಪ ದೂರದವರೆಗೂ ಅಟ್ಟಾಡಿಸಿದ್ದರು. ಪೊಲೀಸ್ ಚೌಕಿ ಸರ್ಕಲ್ ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆಂಜನೇಯ ಮತ್ತು ಮಧುವನ್ನು ಕಾರಿನಲ್ಲಿ ಹಿಂಬಾಲಿಸಿ, ಬೈಕಿಗೆ ಡಿಕ್ಕಿ ಹೊಡೆಸಿ, ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.
ಹಂದಿ ಅಣ್ಣಿ ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. 4 ದಿನದ ಬಳಿಕ ಚಿಕ್ಕಮಗಳೂರು ಪೊಲೀಸರಿಗೆ ಎಂಟು ಆರೋಪಿಗಳು ಶರಣಾಗಿದ್ದರು. ಅದೇ ಮಾದರಿಯಲ್ಲಿ ಆಂಜನೇಯ ಮತ್ತು ಮಧು ಮೇಲೆ ದಾಳಿ ನಡೆಸಿದ ಆರೋಪಿಗಳು ಹಾವೇರಿ ಜಿಲ್ಲೆ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದಾರೆ.
ಶಿವಮೊಗ್ಗದಿಂದಲೆ ಫಾಲೋ ಮಾಡಿದ್ದರಾ?
ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ವಿಚಾರಣೆ ಹಿನ್ನೆಲೆ ಆರೋಪಿಗಳಾದ ಆಂಜನೇಯ ಮತ್ತು ಮಧು ಹರಿಹರದಿಂದ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಸ್ವಗ್ರಾಮ ಭಾನುವಳ್ಳಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಚೀಲೂರು ಬಳಿ ಸ್ಕಾರ್ಪಿಯೋ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಆರೋಪಿಗಳನ್ನು ಸ್ಕಾರ್ಪಿಯೋ ಕಾರು ಶಿವಮೊಗ್ಗದಿಂದಲೇ ಹಿಂಬಾಲಿಸಿರುವ ಶಂಕೆ ಇದೆ. ಈ ಕುರಿತು ವಿಚಾರಣೆ ನಡೆಯುತ್ತಿದೆ.
ಪರಾರಿಯಾಗಿದ್ದ ಆರೋಪಿಗಳು
ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಆಂಜನೇಯ ಸ್ಥಳದಲ್ಲೆ ಸಾವನ್ನಪ್ಪಿದ್ದ. ಮಧು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ರಾತ್ರಿ ಮಧು ಕೈಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಘಟನೆ ಬಳಿಕ ಆರೋಪಿಗಳು ತಮ್ಮ ಸ್ಕಾರ್ಪಿಯೋ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ರಿಷ್ಯಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಇದನ್ನೂ ಓದಿ – ಅಟ್ಟಾಡಿಸಿ ಹತ್ಯೆ ಮಾಡಿದ್ದ ಕೇಸಿಗೆ ಪ್ರತೀಕಾರದ ಶಂಕೆ, ಚೀಲೂರು ಬಳಿ ಇಬ್ಬರ ಮೇಲೆ ದಾಳಿ, ಒಬ್ಬ ಸಾವು