SHIVAMOGGA LIVE | 18 JULY 2023
SHIMOGA : ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಕಪ್ಪು ಇನ್ನೋವಾ (Innova) ಕಾರಿನಲ್ಲಿ ಯುವತಿಯ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರೀತಿಸಿ ಮದುವೆಯಾಗಿರುವ ಹುಡುಗನ ಜೊತೆ ತೆರಳಿದ್ದಾಗಿ ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆದ್ದರಿಂದ ಇಬ್ಬರನ್ನು ಬಿಟ್ಟು ಕಳುಹಿಸಲಾಗಿದೆ.
ಏನಿದು ಕಿಡ್ನಾಪ್ ಕೇಸ್?
ಶಿವಮೊಗ್ಗದ ಬಡಾವಣೆಯೊಂದರ ಯುವತಿ ತನ್ನ ತಾಯಿಯೊಂದಿಗೆ ಸಾಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಇನ್ನೋವಾ ಕಾರಿನಲ್ಲಿ ಬಂದವರು ಯುವತಿಯನ್ನು ಅಪಹರಿಸಿದ್ದರು. ವಿಚಲಿತರಾದ ತಾಯಿ ಕೂಗಿಕೊಂಡಿದ್ದಾರೆ. ಹಾಗಾಗಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು. ತಾಯಿಗೆ ಧೈರ್ಯ ಹೇಳಿದ ಜನರು ದೊಡ್ಡಪೇಟೆ ಠಾಣೆಗೆ ಕಳುಹಿಸಿದ್ದರು. ಕೂಡಲೆ ಯುವತಿಯ ಕುಟುಂಬದವರು ದೊಡ್ಡಪೇಟೆ ಠಾಣೆಗೆ ಆಗಮಿಸಿ ಪೊಲೀಸರ ನೆರವು ಕೋರಿದ್ದರು.
ಹಿಂಬಾಲಿಸಿದ ಪೊಲೀಸರು
ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿ ಸಿಸಿಟಿವಿಗಳ ಪರಿಶೀಲನೆ ನಡೆಸಿದರು. ಇನ್ನೋವಾ ಕಾರು ಕೊಪ್ಪ ಕಡೆಗೆ ತೆರಳುತ್ತಿರುವುದನ್ನು ಪತ್ತೆ ಹಚ್ಚಿ ಹಿಂಬಾಲಿಸಿದರು. ಕಾರಿನಲ್ಲಿದ್ದವರಿಗೆ ಪೊಲೀಸರು ಹಿಂಬಾಲಿಸುತ್ತಿರುವ ಅರಿವಾಗಿ ನೇರವಾಗಿ ಕೊಪ್ಪ ಪೊಲೀಸ್ ಠಾಣೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ‘ತಾವಿಬ್ಬರು ವಯಸ್ಕರು. ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿರುವುದಾಗಿʼ ತಿಳಿಸಿದ್ದಾರೆ. ಕೊಪ್ಪ ಪೊಲೀಸರು ದೊಡ್ಡಪೇಟೆ ಠಾಣೆ ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ.
ಸುಖಾಂತ್ಯ ಕಂಡ ಪ್ರಕರಣ
ರಿಜಿಸ್ಟರ್ ಮದುವೆಯಾಗಿರುವ ವಿಚಾರ ಪೋಷಕರಿಗೆ ಗೊತ್ತಿರಲಿಲ್ಲ. ಹಾಗಾಗಿ ಯುವತಿ ಇನ್ನೋವಾ (Innova) ಕಾರಿನಲ್ಲಿ ತೆರಳಿದ್ದನ್ನು ಕಿಡ್ನಾಪ್ ಎಂದುಕೊಂಡು ಪೊಲೀಸ್ ಠಾಣೆಗೆ ದೌಡಾಯಿಸಿದ್ದರು.
ಇದನ್ನೂ ಓದಿ – ಹೆದ್ದಾರಿಯಲ್ಲಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್
ಯುವತಿಯ ಮನೆ ಸಮೀಪದಲ್ಲಿ ಯುವಕ ಅಂಗಡಿ ತೆರೆದಿದ್ದ. ಅಲ್ಲಿಯೇ ಇಬ್ಬರ ಮಧ್ಯೆ ಪ್ರೀತಿ ಆರಂಭವಾಗಿದ್ದು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200