ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಸಾವನ್ನಪ್ಪಿದ ಮಂಜುನಾಥ ರಾವ್ ಮನೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಇನ್ನೊಂದೆಡೆ, ಹಲವು ಪ್ರಮುಖರು ಮಂಜುನಾಥ ರಾವ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತಿದ್ದಾರೆ.
ಶಿವಮೊಗ್ಗದ ವಿಜಯನಗರದಲ್ಲಿರುವ ಮಂಜುನಾಥ ರಾವ್ ಮನೆಗೆ ಪ್ರಮುಖರು ಭೇಟಿ ನೀಡುತ್ತಿದ್ದಾರೆ.
ಇವತ್ತು ಏನೇನಾಯ್ತು?
- ಮಂಜುನಾಥ ರಾವ್ ಮನೆಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ದರು. ತಾಯಿ ಸುಮತಿ, ಪತ್ನಿ ಪಲ್ಲವಿ, ಪುತ್ರ ಅಭಿಜಯ್ ಅವರಿಗೆ ಸಾಂತ್ವನ ಹೇಳಿದರು.
- ಮಾಜಿ ಸಚಿವ ರೇಣುಕಾಚಾರ್ಯ ಅವರು ಭೇಟಿ ನೀಡಿದ್ದರು. ಘಟನೆ ಕುರಿತು ಮಾಹಿತಿ ಪಡೆದರು. ಕುಟುಂಬದವರ ಜೊತೆಗೆ ಚರ್ಚಿಸಿದರು.
- ಪಹಲ್ಗಾಮ್ ಘಟನೆ ಕುರಿತು ಮಾಹಿತಿ ಪಡೆಯಲು ಎನ್.ಐ.ಎ ಅಧಿಕಾರಿಗಳು ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಪಲ್ಲವಿ ಅವರಿಂದ ಮಾಧ್ಯಮಗಳಿಗೆ ಮಾಹಿತಿ.
- ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಾರಾಯಣ ಬಲಿ ಪೂಜೆ ನಡೆಸಲಾಯಿತು. ಪುತ್ರ ಅಭಿಜಯ್ ಕಾರ್ಯ ನೆರವೇರಿದರು.
ನೆಗೆಟಿವ್ ಕಾಮೆಂಟ್ಗೆ ಪಲ್ಲವಿ ಬೇಸರ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಲ್ಲವಿ, ಪಹಲ್ಗಾಮ್ನಲ್ಲಿ ಉಗ್ರರು ಧರ್ಮ ವಿಚಾರಿಸಿ ಶೂಟ್ ಮಾಡಿದ್ದು ನಿಜ. ಆದರೆ ನಮ್ಮ ಬಳಿ ಹಾಗೆ ವಿಚಾರಿಸಿರಲಿಲ್ಲ. ಹೊಟೇಲ್ಗೆ ಬಂದಾಗ ಬೇರೆಯವರು ಈ ವಿಚಾರ ತಿಳಿಸಿದರು. ನನ್ನ ಪತಿ ಮತ್ತು ಲೆಫ್ಟಿನೆಂಟ್ ಅವರಿಗೆ ಒಟ್ಟಿಗೆ ಶೂಟ್ ಮಾಡಿದ್ದರು. ಉಗ್ರರು ತೆರಳುವಾಗ ನಾನು ನಮ್ಮನ್ನು ಕೊಂದುಬಿಡಿ ಎಂದು ಕೂಗಿದೆ. ಆಗ ನಮ್ಮ ಮಗ ‘ಕುತ್ತೆ ಹಮೇ ಬಿ ಮಾರ್ ದೋʼ ಎಂದು ಕೂಗಿದ್ದ. ಇದು ನಿಜ ಎಂದು ಸಾಬೀತು ಪಡಿಸಲು ವಿಡಿಯೋ ಮಾಡಬೇಕಿತ್ತಷ್ಟೆ. ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್ ಬರುತ್ತಿರುವುದು ಬೇಸರ ತರಿಸಿದೆ ಎಂದರು.
ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲು ಕುರಿತು ಇಲಾಖೆಯಿಂದ ಪ್ರಮುಖ ಅಪ್ಡೇಟ್, ಏನದು?



