ಶಿವಮೊಗ್ಗ: ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಯ ಭೇಟಿಗೆ ಬಂದಿದ್ದ ವ್ಯಕ್ತಿಯೊಬ್ಬ ಗಾಂಜಾ ಪೂರೈಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಟಿಪ್ಪುನಗರದ ಕಲೀಂ ಎಂಬಾತ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಮೊಹಮ್ಮದ್ ಶೋಹೆಬ್ನ ಭೇಟಿಗೆ ಬಂದಿದ್ದ. ಜೈಲಿನ ಮುಖ್ಯ ದ್ವಾರದಲ್ಲಿ KSISF ಸಿಬ್ಬಂದಿ ಸಂದರ್ಶಕರನ್ನು ತಪಾಸಣೆ ನಡೆಸುತ್ತಿದ್ದರು. ಕಲೀಂನ ತಂದಿದ್ದ ವಸ್ತುಗಳ ಪರಿಶೀಲನೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಬೇಕರಿ ವಸ್ತುಗಳು, ಬಟ್ಟೆಗಳು ಮತ್ತು ಬ್ಲಾಂಕೇಟ್ಗಳನ್ನು ಕಲೀಂ ತಂದಿದ್ದ.

ಬ್ಲಾಂಕೆಟ್ ಪರಿಶೀಲಿಸಿದಾಗ ಅದರ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತು ಇರಿಸಿರುವುದು ಗೊತ್ತಾಗಿದೆ. ಅನುಮಾನಗೊಂಡು KSISF ಸಿಬ್ಬಂದಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಕೂಡಲೆ ಬ್ಲಾಂಕೆಟ್ ಮತ್ತು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಕಲೀಂನನ್ನು ತುಂಗಾ ನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


