ಶಿವಮೊಗ್ಗ: ವಿದ್ಯಾನಗರದ 4ನೇ ಎ ಅಡ್ಡರಸ್ತೆಯಲ್ಲಿರುವ ಪಿಡಿಒ ನಟರಾಜ್ ಕೆ.ಎನ್. ಅವರ ಮನೆಯಲ್ಲಿನ ಕಳ್ಳತನ ಪ್ರಕರಣ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಇನ್ನು, ಕೃತ್ಯದ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಕಳ್ಳನ ಚಲನವಲನ ಸಂಪೂರ್ಣ ಸೆರೆಯಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಟರಾಜ್ ಮತ್ತು ಅವರ ಪತ್ನಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 28 ರಂದು ದಂಪತಿ ಕೆಲಸಕ್ಕೆ ತೆರಳಿದ್ದರು. ಸಂಜೆ ಅವರ ಮಗಳು ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿರುವ ಕುರಿತು ತಿಳಿಸಿದ್ದರು. ಕೂಡಲೆ ದಂಪತಿ ಮನೆಗೆ ಬಂದು ಪರಿಶೀಲಿಸಿದಾಗ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳ ಒಳಗೆ ನುಗ್ಗಿದ್ದು, ಬೆಡ್ ರೂಂನಲ್ಲಿದ್ದ ಬೀರು ಒಡೆದು ಕಳ್ಳತನ ಮಾಡಿದ್ದ.
ಬೀರುವಿನಲ್ಲಿದ್ದ 110 ಗ್ರಾಂ ತೂಕದ ಚಿನ್ನದ ಸರ, 69 ಗ್ರಾಂ ತೂಕದ 3 ನೆಕ್ಲೇಸ್ಗಳು, 240 ಗ್ರಾಂ ತೂಕದ 6 ಬಳೆಗಳು, ಹ್ಯಾಂಗಿಂಗ್ಸ್, ಕವಿಯೋಲೆಗಳು, 40 ಗ್ರಾಂ ಹಾಗೂ 16 ಗ್ರಾಂ ತೂಕದ ಉಂಗುರಗಳು, ಬ್ರೇಸ್ಲೆಟ್ಗಳು, ಚಿನ್ನದ ಗಟ್ಟಿ, ಲಕ್ಷ್ಮಿ ತಾಳಿ ಹಾಗೂ ವಿವಿಧ ಮೌಲ್ಯದ ಚಿನ್ನದ ಸರಗಳು ಸೇರಿ ಒಟ್ಟು 943 ಗ್ರಾಂ ಚಿನ್ನದ ಒಡವೆ ಕಳ್ಳತನವಾಗಿವೆ. ಇವುಗಳ ಮೌಲ್ಯ ₹1,42,29,900 ಎಂದು ತಿಳಿಸಲಾಗಿದೆ.
ಇನ್ನು, 500 ಗ್ರಾಂ ಬೆಳ್ಳಿ ವಸ್ತು, ₹86,000 ನಗದು ಹಾಗೂ 15 ಕೈಗಡಿಯಾರಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಕಳ್ಳತನವಾಗಿರುವ ವಸ್ತುಗಳ ಒಟ್ಟು ಮೌಲ್ಯ 1,42,29,900 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ದೃಶ್ಯ ಲಭ್ಯ
ಇನ್ನು, ಆಗಸ್ಟ್ 28ರಂದು ನಡೆದ ಕಳ್ಳತನದ ಸಿಸಿಟಿವಿ ದೃಶ್ಯ ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ. ಮಧ್ಯಾಹ್ನ 1:44ಕ್ಕೆ ವ್ಯಕ್ತಿಯೊಬ್ಬ ನಟರಾಜ್ ಅವರ ಮನೆ ಆವರಣ ಪ್ರವೇಶಿಸಿದ್ದಾನೆ. ಮನೆಯ ಸುತ್ತಲು ಓಡಾಡಿ, ಕಿಟಿಕಿಯೊಳಗೆ ಇಣುಕಿ ಪರೀಕ್ಷಿಸಿದ್ದಾನೆ. ಬಳಿಕ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯಾಹ್ನ 2:16ಕ್ಕೆ ಆತ ಮನೆಯೊಳಗಿನಿಂದ ಬ್ಯಾಗು ಹಿಡಿದುಕೊಂಡು ಹೊರ ಬಂದಿದ್ದಾನೆ. ಮನೆ ಪಕ್ಕದ ಓಣಿಯಲ್ಲಿ ನಡೆದುಕೊಂಡು ಹೋಗಿದ್ದಾನೆ.