ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿದ ಸವಾರನೊಬ್ಬನನ್ನು ತಡೆದ ಪೊಲೀಸರನ್ನೆ (traffic police) ತಳ್ಳಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ನಗರದ ಗಾಂಧಿ ಬಜಾರ್ನಲ್ಲಿ (Gandhi Bazaar) ಘಟನೆಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಏನಾಯ್ತು ಘಟನೆ?
ಮೇ 4ರ ಬೆಳಗ್ಗೆ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಮತ್ತು ಸಿಪಿಸಿ ಸಂತೋಷ್ ಅವರು ಗಾಂಧಿ ಬಜಾರ್ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಸಯ್ಯದ್ ಮುಜಾಮಿಲ್ ಎಂಬಾತ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು, ಆತನನ್ನು ತಡೆದು ವಾಹನ ನಿಲ್ಲಿಸಲು ಸೂಚಿಸಿದರು. ರಸ್ತೆ ಮಧ್ಯೆಯೇ ಬೈಕ್ ನಿಲ್ಲಿಸಿದ ಸವಾರ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದನು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೊಲೀಸರನ್ನು ತಳ್ಳಿ, ಬೆದರಿಕೆ ಒಡ್ಡಿದರು
ಸಯ್ಯದ್ ಮುಜಾಮಿಲ್ಗೆ ಹೆಲ್ಮೆಟ್ ಧರಿಸುವಂತೆ ಪೊಲೀಸರು ತಿಳಿಸುತ್ತಿದ್ದಾಗ ಜಬೀವುಲ್ಲಾ ಎಂಬಾತ ಸ್ಥಳಕ್ಕೆ ಬಂದಿದ್ದ. ಆತ “ನಾವು ಹೆಲ್ಮೆಟ್ ಹಾಕುವುದಿಲ್ಲ. ನೀನು ಏನು ಮಾಡುತ್ತೀಯ?” ಎಂದು ಕೂಗಾಡಿದ್ದಾನೆ. ನಂತರ ಇಬ್ಬರೂ ಸೇರಿ ಪೊಲೀಸ್ ಅಧಿಕಾರಿಗಳನ್ನು ತಳ್ಳಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬೈಕಿನ ಕೀ ಕಿತ್ತುಕೊಂಡಿದ್ದಾರೆ. ಅಲ್ಲದೆ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಿಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಆರು ಮಂದಿಗೆ 3 ವರ್ಷ ಜೈಲು, ₹2,30,000 ದಂಡ, ಏನಿದು ಕೇಸ್?
Why were two men arrested for obstructing traffic police on duty in Shivamogga’s Gandhi Bazaar? Read more about the incident involving a helmet violation and assault.







