ಭದ್ರಾವತಿ: ಹಳೆ ದ್ವೇಷದ ಹಿನ್ನೆಲೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧ ಆರು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೈಲು ಶಿಕ್ಷೆ (Prison) ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಏನಿದು ಕೇಸ್? ಹಲ್ಲೆ ಆಗಿದ್ದೆಲ್ಲಿ?
ಭದ್ರಾವತಿಯ ಜಿಂಕ್ಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬು ಎಂಬುವವರ ತೆಂಗಿನ ತೋಟದಲ್ಲಿ 2020ರ ಮೇ 10ರಂದು ಘಟನೆ ನಡೆದಿತ್ತು. ಕಿರಣ್, ಮಂಜುನಾಥ್ ಮತ್ತು ಅರುಣ ಎಂಬುವವರು ತೋಟದಲ್ಲಿ ನಿಂತಿದ್ದರು. ಈ ವೇಳೆ ಅಜೇಯ ಅಲಿಯಾಸ್ ಅಜ್ಜಿ, ತೇಜು ಅಲಿಯಾಸ್ ತೇಜಸ್ವಿ, ಮನು ಅಲಿಯಾಸ್ ಮನೋಜ್, ಆದರ್ಶ ಅಲಿಯಾಸ್ ಆದು, ಅರುಣ ಹಾಗೂ ಪಾನಿಪುರಿ ರಂಗ ಎಂಬುವವರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ : ನೀರು ಹಾಯಿಸಲು ತೋಟಕ್ಕೆ ಬಂದ ಮಾಲೀಕನಿಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ
ಮನು ಎಂಬಾತ ಮಂಜುನಾಥ್ನನ್ನು ಹಿಡಿದುಕೊಂಡಿದ್ದಾಗ, ಅಜೇಯ ಎಂಬಾತ ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ಮಂಜುನಾಥ್ನ ಬಲಗೈ, ಮೊಣಕೈ ಹಾಗೂ ಸೊಂಟದ ಎಡಭಾಗಕ್ಕೆ ಬೀಸಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಸ್, ದೋಷಾರೋಪ ಪಟ್ಟಿ
ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಎ.ಎಸ್.ಐ ಕುಬೇರಪ್ಪ ಅವರು ತನಿಖೆ ನಡೆಸಿದ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಜೈಲು ಶಿಕ್ಷೆ, ದಂಡ ವಿಧಿಸಿದ ಕೋರ್ಟ್
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪ ದೃಢಪಟ್ಟ ಹಿನ್ನೆಲೆ ಮುಖ್ಯ ಆರೋಪಿ ಅಜೇಯನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ. ಎಲ್ಲಾ ಆರು ಆರೋಪಿಗಳಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಇನ್ನು, ₹2,30,000 ದಂಡ ವಿಧಿಸಲಾಗಿದೆ. ನೊಂದ ಮಂಜುನಾಥ್ ಅವರಿಗೆ ₹1,50,000 ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.
