ಶಿವಮೊಗ್ಗ: ನಗರದ ಎನ್ಟಿ ರಸ್ತೆಯಲ್ಲಿರುವ ಟಾನಿಕ್ ಬಾರ್ ಬಳಿ ಬಿಯರ್ ಬಾಟಲಿಯಿಂದ (Bottle) ಹೊಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ಹಲ್ಲೆಯಿಂದ ಗಾಯಗೊಂಡ ಲೋಹಿತ್ (21) ಎಂಬುವವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸಂಜಯ್ ಮತ್ತು ಆತನ ಸ್ನೇಹಿತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?
ಭಾನುವಾರ ಸಂಜೆ ಲೋಹಿತ್ ಅವರು ತಮ್ಮ ಸ್ನೇಹಿತರೊಂದಿಗೆ ಬಾರ್ಗೆ ಹೋದಾಗ ಅಲ್ಲಿಗೆ ಬಂದ ಸಂಜಯ್ ಎಂಬುವವನು ಗಲಾಟೆ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಸಂಜಯ್ ಸ್ನೇಹಿತ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಲೋಹಿತ್ ಅವರ ಎಡಕಣ್ಣಿನ ಮೇಲ್ಭಾಗ ಹಾಗೂ ಕೆನ್ನೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ.

ಹಲ್ಲೆಯಿಂದ ರಕ್ತ ಬರುತ್ತಿದ್ದನ್ನು ಕಂಡು ಲೋಹಿತ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಅವರ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









