ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ನವೆಂಬರ್ 2021
ಸಾಮೂಹಿಕ ಭೋಜನ, ಅನ್ನ ಸಂತರ್ಪಣೆ, ಜಾತ್ರೆ, ಉತ್ಸವದಂತಹ ಸಂದರ್ಭಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಇದೇ ರೀತಿ ಸರ್ಕಾರಿ ಹಾಸ್ಟೆಲ್ಗಳು, ವೃದ್ಧಾಶ್ರಮಗಳು ಹಾಗೂ ಇತರ ಸರ್ಕಾರಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ಅವಘಡಗಳು ಸಂಭವಿಸಿದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನಿಂದ ಇದನ್ನು ಪಾಲಿಸಲು ಆದೇಶಿಸಿದ್ದಾರೆ.
ಏನೆಲ್ಲ ಕ್ರಮ ಕೈಗೊಳ್ಳಬೇಕು
ಸಾಮೂಹಿಕ ಭೋಜನ ಅಥವಾ ಅನ್ನ ಸಂತರ್ಪಣೆ ನಡೆಸುವ ಪೂರ್ವದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಅಡುಗೆ ಕೋಣೆಯಲ್ಲಿ ಅಪರಿಚಿತ ಅಥವಾ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ವಹಿಸಬೇಕು.
ಅಡುಗೆ ಕೋಣೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ | ಮದುವೆ ಮೆನೆಯಲ್ಲಿ ಊಟ ಮಾಡಿ ಅಸ್ವಸ್ಥರಾಗಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಾವು
ಅಡುಗೆಗೆ ಬಳಸುವ ನೀರು ಶುದ್ಧವಾಗಿರುವುದನ್ನು ಖಾತ್ರಿಪಡಿಸಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ನೀರನ್ನು ಆರೋಗ್ಯ ಇಲಾಖೆ ಸಹಕಾರದಿಂದ ಪರೀಕ್ಷೆಗೆ ಒಳಪಡಿಸಬೇಕು.
ಅಡುಗೆ ಮಾಡುವವರು, ಸಹಾಯಕರು, ಬಡಿಸುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ ನೇಮಕ ಮಾಡಬೇಕು. ಕೈಗವಸು ಅಥವಾ ತಲೆಗೆ ಟೊಪ್ಪಿಯನ್ನು ಬಳಸಬೇಕು.
ಪ್ರತಿ ಸಿಬ್ಬಂದಿಯನ್ನು 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಪಡಿಸುವುದು. ಅವರಿಗೆ ಪ್ರತಿ 6 ತಿಂಗಳಿಗೊಮ್ಮೆ ಜಂತು ಹುಳು ನಿವಾರಣಾ ಮಾತ್ರೆಯನ್ನು ನೀಡಬೇಕು.
ಇದನ್ನೂ ಓದಿ | ಮದುವೆ ಮನೆಯಲ್ಲಿ ಊಟ ಮಾಡಿದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಹೊಳೆಹೊನ್ನೂರು, ಭದ್ರಾವತಿ, ಶಿವಮೊಗ್ಗ ಆಸ್ಪತ್ರೆಗೆ ದಾಖಲು
ಅಡುಗೆ ಭಟ್ಟರ ಮತ್ತು ಊಟ ಬಡಿಸುವವರ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸ್ಥಳೀಯ ಸರ್ಕಾರಿ ವೈದ್ಯಾಧಿಕಾರಿಗಳಿಗೆ ಮೊದಲೇ ನೀಡಬೇಕು.
ಸಭೆ, ಸಮಾರಂಭಗಳಿಗೆ ಪಡಿತರ ಮತ್ತು ಪ್ಯಾಕೇಜ್ ಕುಡಿಯುವ ನೀರು ಖರೀದಿಸುವಾಗ ತಯಾರಿಕೆ ದಿನಾಂಕ, ಮುಕ್ತಾಯ ದಿನಾಂಕ ಪರಿಶೀಲಿಸಬೇಕು.
ಏನಾದರೂ ಅವಘಡ ಸಂಭವಿಸಿದರೆ ಪಡಿತರ / ನೀರು ಖರೀದಿಸಿದ ಬಿಲ್ ಆರೋಗ್ಯಾಧಿಕಾರಿಗಳಿಗೆ ನೀಡಬೇಕು.
ಇದನ್ನೂ ಓದಿ | ಪ್ರಸಾದ ಸೇವಿಸಿದ ಹಲವರು ಅಸ್ವಸ್ಥ, ಸಾಗರ ಆಸ್ಪತ್ರೆಗೆ ದಾಖಲು
ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ನೀರು, ಕೈತೊಳೆದ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ವ್ಯವಸ್ಥೆಯನ್ನು ಮಾಡಬೇಕು.
ದಾಸ್ತಾನು ಕೊಠಡಿಯನ್ನು ಸ್ವಚ್ಛವಾಗಿರಿಸಬೇಕು. ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು.
ಆಹಾರ ಪದಾರ್ಥ ಸರಬರಾಜು ಸಂದರ್ಭದಲ್ಲಿ ಕಲಬೆರಕೆ ಕಂಡು ಬಂದಲ್ಲಿ, ಅವುಗಳನ್ನು ಬಳಸದೆ ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಬೇಕು.
ಅಡುಗೆ ತಯಾರಿಸಿದ ನಂತರ ಪಾತ್ರೆಗಳಲ್ಲಿ ಹಲ್ಲಿ ಅಥವಾ ಜಿರಲೆ ಬೀಳದಂತೆ ಸುರಕ್ಷಿತವಾಗಿ ಮುಚ್ಚಿಡಬೇಕು.
ಇದನ್ನೂ ಓದಿ | 150ಕ್ಕೂ ಹೆಚ್ಚು ಜನರು ದಿಢೀರ್ ಅಸ್ವಸ್ಥ, ಹೊಟ್ಟೆ ನೋವು, ವಾಂತಿ, ಭೇದಿಯಿಂದ ಹಲವರು ಆಸ್ಪತ್ರೆಗೆ
ಅನ್ನ ಸಂತರ್ಪಣೆ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು. ಸೂಕ್ತ ಶೌಚಾಲಯ ವ್ಯವಸ್ಥೆ ಇರಬೇಕು. ಲಘು ಉಪಾಹಾರ ಪದಾರ್ಥಗಳನ್ನು ಮುದ್ರಿತ ಪತ್ರಿಕೆಗಳಲ್ಲಿ ವಿತರಿಸಬಾರದು.
ದೇವಸ್ಥಾನ, ಅಂಗನವಾಡಿ, ಶಾಲೆ, ವಸತಿ ಶಾಲೆ, ಹಾಸ್ಟೆಲ್, ಕ್ಯಾಂಟೀನ್, ಕಾರಾಗೃಹ ಮತ್ತು ಆಸ್ಪತ್ರೆ ಕ್ಯಾಂಟೀನ್ಗಳಲ್ಲಿನ ಅಡುಗೆ ಕೊಠಡಿ ಮತ್ತು ಊಟದ ಕೊಠಡಿಗಳಲ್ಲಿ ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
ಯಾವುದೇ ಅವಘಡಗಳು ಸಂಭವಿಸಿದರೆ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಮಾರಂಭದ ಆಯೋಜಕರನ್ನು ನೇರ ಹೊಣೆಗಾರ ಮಾಡಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದ್ದಾರೆ.