SHIVAMOGGA LIVE NEWS | 21 SEPTEMBER 2023
SHIMOGA : ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಪ್ರಣವಾನಂದ ಸ್ವಾಮೀಜಿ (Pranavananda Swamiji) ಅವಹೇಳನಕಾರಿ ಹೇಳಿಕೆ (Statement) ನೀಡಿದ್ದು ಖಂಡನೀಯ. ಸ್ವಾಮೀಜಿ ತಕ್ಷಣ ತಮ್ಮ ಹೇಳಿಕೆ ಹಿಂಪಡೆಯುಬೇಕು ಎಂದು ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯದ ಸ್ವಯಂ ಘೋಷಿತ ಸ್ವಾಮೀಜಿ. ಅವರು ಸಮುದಾಯದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರ ಕುರಿತು ಆಧಾರ ರಹಿತ ಹೇಳಿಕೆ (Statement) ನೀಡಿ, ಗೊಂದಲ ಮೂಡಿಸುತ್ತಿದ್ದಾರೆ. ಮಧು ಬಂಗಾರಪ್ಪ ಅವರ ಕುರಿತು ಪ್ರಣವಾನಂದ ಸ್ವಾಮೀಜಿ ಹೇಳಿಕೆಯನ್ನು ಸಮುದಾಯದ ಎಲ್ಲ ಮುಖಂಡರು ಖಂಡಿಸಿದ್ದಾರೆ ಎಂದು ತಿಳಿಸಿದರು.
ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಈಡಿಗ ಸಮುದಾಯದ ಅಧಿಕೃತ ಸ್ವಾಮೀಜಿ. ನಮ್ಮ ಸಮುದಾಯದ ಎಲ್ಲ ಉಪ ಪಂಗಡಗಳ ಮುಖಂಡರು ಕೂಡ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರನ್ನೆ ತಮ್ಮ ಗುರುಗಳು ಎಂದು ಒಪ್ಪಿಕೊಂಡಿದ್ದಾರೆ. ಇವರ ಆದೇಶದಂತೆ ಸಮುದಾಯ ನಡೆಯಲಿದೆ ಎಂದು ಹುಲ್ತಿಕೊಪ್ಪ ಶ್ರೀಧರ್ ತಿಳಿಸಿದರು.
ಈಡಿಗ ಸಮುದಾಯದ ಪ್ರಮುಖರಾದ ಹೆಚ್.ವಿ.ರಾಮಚಂದ್ರ, ಜಿ.ಡಿ.ಮಂಜುನಾಥ್, ಮಹೇಂದ್ರ, ಕಾಗೋಡು ರಾಮಪ್ಪ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
ಬೆಂಗಳೂರಿನಲ್ಲಿ ಸಭೆ, ಖಂಡನೆ
ಇನ್ನೊಂದೆಡೆ ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಈಡಿಗರ ಸಂಘದ ಸಭೆ ನಡೆಸಲಾಯಿತು. ಪ್ರಣವಾನಂದ ಸ್ವಾಮೀಜಿ ಅವರ ಹೇಳಿಕೆ ಖಂಡಿಸಿದ ಮುಖಂಡರು, ಅವರು ತಮ್ಮ ಸಮುದಾಯದ ಸ್ವಾಮೀಜಿಯಲ್ಲ ಎಂದು ಒಮ್ಮತದ ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಈವರೆಗಿನ Top 10 News | 21 ಸೆಪ್ಟೆಂಬರ್ 2023
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯದ ಸ್ವಯಂ ಘೋಷಿತ ಸ್ವಾಮೀಜಿ. ಈಡಿಗ ಸಮುದಾಯಕ್ಕೂ ಸ್ವಾಮೀಜಿಗೂ ಸಂಬಂಧವಿಲ್ಲ. ಸಮುದಾಯದಲ್ಲಿ ಒಡಕು ಸೃಷ್ಟಿಸಿ, ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ಕೇಂದ್ರ ಸಂಘ ಮತ್ತು ಜಿಲ್ಲಾ ಸಂಘಗಳ ಕುರಿತು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ. ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.