SHIVAMOGGA LIVE NEWS | 11 APRIL 2023
SHIMOGA : ಚುನಾವಣೆ (Election) ಹೊಸ್ತಿಲಲ್ಲಿ ಅನಿರೀಕ್ಷಿತಗಳಿಗೆ ಸಾಕ್ಷಿಯಾಗಿರುವ ಶಿವಮೊಗ್ಗ ವಿಧಾನಸಭೆ ಕ್ಷೇತ್ರ ಮತ್ತೊಂದು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಚುನಾವಣಾ ರಾಜಕೀಯದಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿನ ರಾಜಕೀಯ ಲೆಕ್ಕಾಚಾರಗಳು ಮತ್ತೊಂದು ಮಜಲು ಪಡೆದುಕೊಂಡಿದೆ.
ದಿಢೀರ್ ರಾಜಕೀಯ ಬೆಳವಣಿಗೆ
ಚುನಾವಣೆ (Election) ಕಾವು ಪಡೆಯುತ್ತಿದ್ದಂತೆ ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ದಿಢೀರ್ ಬೆಳವಣಿಗೆಗಳು ನಡೆಯುತ್ತಿವೆ. ಆರಂಭದಲ್ಲಿ ಅಷ್ಟೇನು ಕುತೂಹಲವಿಲ್ಲದ, ನಿರೀಕ್ಷಿತ ಫಲಿತಾಂಶದ ಕ್ಷೇತ್ರ ಎಂದೇ ಹೇಳಲಾಗಿತ್ತು. ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಅವರಿಗೇ ಟಿಕೆಟ್ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳು ಈಶ್ವರಪ್ಪ ಅವರನ್ನು ಪರಿಗಣಿಸಿಯೇ ಚುನಾವಣಾ ಲೆಕ್ಕಾಚಾರ, ರಣತಂತ್ರ ಹೆಣೆಯುತ್ತಿದ್ದವು. ಜನಪರ ಜೀವಪರ ಘೋಷಣೆಯೊಂದಿಗೆ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅವರು ಸದ್ದು ಮಾಡಿದ್ದರು. ಸಾಮಾಜಿಕ ಚುಟುವಟಿಕೆ, ಫ್ಲೆಕ್ಸ್ ಮೂಲಕ ಜನರ ಮನಸಲ್ಲಿ ಸ್ಥಾನ ಪಡೆಯಲು ಯತ್ನಿಸಿದ್ದರು. ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾದರು. ಈಗ ಅವರು ಟಿಕೆಟ್ ಆಕಾಂಕ್ಷಿಗಳ ರೇಸ್ನಲ್ಲಿದ್ದಾರೆ.
ಹಠಾತ್ ಎಂಟ್ರಿಯಾದ ಆಯನೂರು
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ವಿಧಾನಸಭೆ ಚುನಾವಣೆಗೆ ದಿಢೀರ್ ಎಂಟ್ರಿಯಾದರು. ತಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿಕೊಂಡರು. ಇದು ಕ್ಷೇತ್ರದ ರಾಜಕೀಯ ಲೆಕ್ಕಾಚಾರವನ್ನು ಬದಲಿಸಿತ್ತು. ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ, ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂದೆಲ್ಲ ಸುದ್ದಿಗಳು ಹಬ್ಬಿದವು. ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲ್ಲಬಹುದಾ, ಕಾಂಗ್ರೆಸ್ನಿಂದ ಅಖಾಡಕ್ಕಿಳಿದರೆ ಗೆಲ್ಲುತ್ತಾರ ಎಂದು ಚರ್ಚೆಗಳು ಗಂಭೀರವಾದವು. ಆಯನೂರು ಮಂಜುನಾಥ್ ಅವರು ಈತನಕ ತಮ್ಮ ಸ್ಪರ್ಧಾ ಕಣದಲ್ಲಿಯೇ ಉಳಿದಿದ್ದಾರೆ.
ಆಕಾಂಕ್ಷಿಗಳಿಗೆ ಗೊಂದಲ
ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿಯು ಗೊಂದಲ ನಿರ್ಮಾಣವಾಗಿದೆ. ಕಾಂಗ್ರೆಸ್ನಲ್ಲಿ ಹನ್ನೊಂದು ಆಕಾಂಕ್ಷಿಗಳಿದ್ದಾರೆ. ಮೊದಲ ಪಟ್ಟಿಯಲ್ಲೋ, ಎರಡನೇ ಪಟ್ಟಿಯಲ್ಲೋ ಶಿವಮೊಗ್ಗದ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈತನಕ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನುವುದು ನಿಗೂಢವಾಗಿದೆ. ಹನ್ನೊಂದು ಅಕಾಂಕ್ಷಿಗಳಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆಯಾ ಅಥವಾ ಹನ್ನೆರಡನೆಯವರು ಅಭ್ಯರ್ಥಿಯಾಗಲಿದ್ದಾರಾ ಅನ್ನುವುದು ಗೊಂದಲ ಉಂಟು ಮಾಡಿದೆ.
ಈಶ್ವರಪ್ಪ ನಿವೃತ್ತಿ ಘೋಷಣೆ
ಇವೆಲ್ಲ ಅನಿರೀಕ್ಷಿತ ಬೆಳವಣಿಗೆ ನಡುವೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಇದು ಕ್ಷೇತ್ರದಲ್ಲಿ ಚುನಾವಣಾ ಲೆಕ್ಕಾಚಾರವನ್ನು ಬದಲಿಸಿದೆ. ಕಳೆದ ಕೆಲವು ದಿನದಿಂದ ಈಶ್ವರಪ್ಪ ಅವರು ಮೌನಕ್ಕೆ ಶರಣಾಗಿದ್ದರು. ಎರಡು ದಿನದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ ಎಂದು ಸುದ್ದಿ ಹಬ್ಬಿತ್ತು. ಇದರಿಂದ ಅವರ ಮುಖದಲ್ಲಿ ಗೆಲುವು ಕಂಡಿತ್ತು. ಸೋಮವಾರ ಸಂಜೆವರೆಗೆ ವಿವಿಧ ವಾರ್ಡ್ಗಳಲ್ಲಿ ಈಶ್ವರಪ್ಪ ಅವರು ಸಭೆ ನಡೆಸಿದ್ದರು. ಆದರೆ ಇವತ್ತು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಬಿಜೆಪಿ ಟಿಕೆಟ್ ಮೇಲೆ ಕುತೂಹಲ
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಾತ್ರಿ ಘೋಷಣೆಯಾಗುವ ಸಾಧ್ಯತೆ ಇದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದರಿಂದ ಬಿಜೆಪಿ ಟಿಕೆಟ್ ಕುರಿತು ಕುತೂಹಲ ಇಮ್ಮಡಿಯಾಗಿದೆ. ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಅವರಿಗೆ ಟಿಕೆಟ್ ಸಿಗಲಿದೆಯಾ? ಆಯನೂರು ಮಂಜುನಾಥ್ ಅವರು ಅಭ್ಯರ್ಥಿಯಾಗಲಿದ್ದಾರ? ಡಾ. ಧನಂಜಯ ಸರ್ಜಿ ಅವರನ್ನು ಕಮಲ ಪಾಳಯ ಕಣಕ್ಕಿಳಿಸಲಿದಯೇ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿದೆ.
ಕಾಂಗ್ರೆಸ್ನಲ್ಲಿ ಹೊಸ ಲೆಕ್ಕಾಚಾರ
ಈಶ್ವರಪ್ಪ ಅವರ ವಿರುದ್ಧ ಪ್ರಬಲ ಎದುರಾಳಿಯನ್ನು ಕಣಕ್ಕಿಳಿಸಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವಾಗಿತ್ತು. ಆದರೆ ಅವರು ನಿವೃತ್ತಿ ಘೋಷಿಸಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಿಚಾರ ಮತ್ತಷ್ಟು ಗೊಂದಲ ಹುಟ್ಟುಹಾಕಿದೆ. ಹೈಕಮಾಂಡ್ ಅಂಗಳದಲ್ಲಿ ಈಗ ಹೊಸ ಗಣಿತ ಶುರುವಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ, ಹೈಕಮಾಂಡ್ ವಿರುದ್ಧ ಅಭಿಮಾನಿಗಳ ಸಿಟ್ಟು
ಅನಿರೀಕ್ಷಿತ ಬೆಳವಣಿಗೆಗಳಿಂದ ಶಿವಮೊಗ್ಗ ನಗರದ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪಕ್ಷಗಳ ಕಾರ್ಯಕರ್ತರಷ್ಟೆ ಅಲ್ಲ, ಮತದಾರರು ಕೂಡ ರಾಜಕೀಯ ಪಕ್ಷಗಳ ಬೆಳವಣಿಗೆಗಳತ್ತ ಕುತೂಹಲದ ಕಣ್ಣಿಡುವಂತಾಗಿದೆ.