ಶಿವಮೊಗ್ಗ ಲೈವ್.ಕಾಂ | 20 ಮೇ 2019
ಮುಖ್ಯಮಂತ್ರಿ ಸೀಟು ಖಾಲಿ ಇಲ್ಲದಿದ್ದರೂ ಎಲ್ಲ ಕಾಂಗ್ರೆಸಿಗರು ಟವಲ್ ಹಾಕಿಕೊಂಡು ಕುಳಿತಿದ್ದಾರೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರೇವಣ್ಣ ಸೇರಿದಂತೆ ಎಲ್ಲ ಕಾಂಗ್ರೆಸಿಗರ ಹೆಸರು ಪ್ರಸ್ತಾಪವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಹೆಸರಿಗಷ್ಟೇ ಮೈತ್ರಿ ಸರ್ಕಾರವಿದೆ. ಆದರೆ ಪರಸ್ಪರ ಒಬ್ಬರ ವಿರುದ್ಧ ಮತ್ತೊಬ್ಬರು ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಸೀಟು ಹಂಚಿಕೆ ವಿಚಾರವಾಗಿ ಮೈತ್ರಿಯಲ್ಲಿ ಜಗಳವಾಗಿತ್ತು. ನಂತರ ಮೈತ್ರಿಯಾದರೂ, ಪರಸ್ಪರ ಬೆಂಬಲ ಕೊಡುತ್ತಿಲ್ಲ ಎಂದು ಚುನಾವಣೆ ವೇಳೆಯಲ್ಲೇ ಗಲಾಟೆಯಾಗಿತ್ತು. ಹಾಗಾಗಿ ಮೈತ್ರಿ ಮುಂದೇನಾಗುತ್ತೋ ಗೊತ್ತಿಲ್ಲ ಎಂದರು.
ಆಪರೇಷನ್ ಹಸ್ತ ಅಸಾಧ್ಯ
ಇನ್ನು, ಬಿಜೆಪಿ ಶಾಸಕರನ್ನು ಆಪರೇಷನ್ ಹಸ್ತ ಮಾಡುವ ಕುರಿತು ಹೇಳಿಕೆ ನೀಡಿದ ಈಶ್ವರಪ್ಪ, ಆಪರೇಷನ್ ಹಸ್ತ ನಡೆಸಲು ಸಾಧ್ಯವಿಲ್ಲ. ಆ ಶಕ್ತಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಬಿಜೆಪಿಯ 104 ಶಾಸಕರು ಹುಲಿಗಳಿದ್ದಂತೆ. ಯಾವೊಬ್ಬ ಶಾಸಕನನ್ನೂ ಮುಟ್ಟಲು ಸಾಧ್ಯವಿಲ್ಲ ಎಂದರು.
ಕಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ವಾತಾವರಣ
ದೇಶದ ರಕ್ಷಣೆ ಮಾಡುವ ನರೇಂದ್ರ ಮೋದಿ ಅವರನ್ನು ದೇಶದ ಜನರು ನಂಬಿದ್ದಾರೆ. ಅದಕ್ಕಾಗಿಯೇ ಅವರ ಕೈಗೆ ಮತ್ತೊಮ್ಮೆ ಅಧಿಕಾರ ಕೊಡಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ರೀತಿಯ ವಾತಾವರಣವಿದೆ. ಕರ್ನಾಟಕದಲ್ಲೂ ನಿರೀಕ್ಷೆಗೆ ಮೀರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]