ಶಿವಮೊಗ್ಗ ಲೈವ್.ಕಾಂ | SHIMOGA | 21 ಏಪ್ರಿಲ್ 2020
ಲಾಕ್ಡೌನ್ ಸಂದರ್ಭವನ್ನು ಬಳಿಸಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಮತ್ತು ನಕಲಿ ಆರೋಗ್ಯ ಇಲಾಖೆ ಅಧಿಕಾರಿ ಜೈಲು ಸೇರಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಗ್ರಾಮಗಳಲ್ಲಿ ಜನರನ್ನ ಬೆದರಿಸಿ ಹಣ ವಸೂಲಿಗಿಳಿದಿದ್ದರು.
ಹಣ ವಸೂಲಿ ಹೇಗೆ? ಯಾಕೆ?
ಕರೋನ ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕರಿಬ್ಬರು, ವಾಹನಗಳಲ್ಲಿ ಹೋಗುತ್ತಿದ್ದವರನ್ನು ತಡೆಯುತ್ತಿದ್ದರು. ತಮ್ಮನ್ನು ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಮಾಸ್ಕ್ ಧರಿಸದೆ ತೆರಳುವುದು ತಪ್ಪು, ನಿಮ್ಮ ವಿರುದ್ದ ಕೇಸ್ ದಾಖಲು ಮಾಡುತ್ತೇವೆ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು.
ವಸೂಲಿಗಿಳಿದವರು ಸಿಕ್ಕಿಬಿದ್ದಿದ್ದು ಹೇಗೆ?
ನಕಲಿ ಅಧಿಕಾರಿಗಳು ಶಿವಮೊಗ್ಗ ತಾಲೂಕು ಹಾರನಹಳ್ಳಿ ಗ್ರಾಮದಲ್ಲಿ ಜನರನ್ನು ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದರು. ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು, ಇಬ್ಬರನ್ನು ವಿಚಾರಿಸಿದ್ದಾರೆ. ಆಗ ಇವರು ನಕಲಿಗಳು ಎಂದು ತಿಳಿದು ಬಂದಿದೆ. ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯಾರು ಈ ನಕಲಿ ಅಧಿಕಾರಿಗಳು?
ಬಂಧಿತ ನಕಲಿ ಪೊಲೀಸ್ ಮತ್ತು ನಕಲಿ ಆರೋಗ್ಯ ಅಧಿಕಾರಿಯನ್ನು ಮೊಹಮ್ಮದ್ ನಕೇರಿ, ಮೊಹಮದ್ ಅತೀಕ್ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಟಿಪ್ಪು ನಗರ ನಿವಾಸಿಗಳು. ಕುಂಸಿ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]