SHIVAMOGGA LIVE NEWS | 9 NOVEMBER 2023
SHIMOGA : ರೈತರ (Farmers) ಸಾಲ ವಸೂಲಿಗೆ ಕೆನರಾ ಬ್ಯಾಂಕ್ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ, ರಾಜ್ಯ ರೈತ ಸಂಘದಿಂದ ಜಿಲ್ಲಾ ಪಂಚಾಯಿತಿ ಎದುರಿನ ಕೆನರಾ ಲೀಡ್ ಬ್ಯಾಂಕ್ ಎದುರು ಅನಾರೋಗ್ಯ ಪೀಡಿತ ಸಾಲಗಾರ ಕುಪೇಂದ್ರಪ್ಪ ಕುಟುಂಬದ ಜತೆ ಪ್ರತಿಭಟನೆ ನಡೆಸಲಾಯಿತು.
5 ಲಕ್ಷ ಬಾಕಿಗೆ 1 ಕೋಟಿ ಬಡ್ಡಿ
ತಾಲೂಕಿನ ಹೊಳೆಹಟ್ಟಿ ಗ್ರಾಮದ ಕುಪ್ಪೇಂದ್ರಪ್ಪ ಎಂಬುವರು ವಿವಿಧ ಉದ್ದೇಶ ಗಳಿಗೆ ಹೊಳಲೂರಿನ ಕೆನರಾ ಬ್ಯಾಂಕಿನಿಂದ ಒಟ್ಟು 9.52 ಲಕ್ಷ ರೂ. ಸಾಲ ಪಡೆದಿದ್ದರು. ಇದರಲ್ಲಿ 4.5 ಲಕ್ಷ ರೂ. ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಉಳಿದ 5.02 ಲಕ್ಷ ಪಾವತಿಸಲು ಬ್ಯಾಂಕಿಗೆ ಹೋದಾಗ ಅಸಲಿನ ಜತೆಗೆ 1 ಕೋಟಿ 1 ಲಕ್ಷ ರೂ. ಬಾಕಿ ಇದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. 9 ಲಕ್ಷಕ್ಕೆ ಬೃಹತ್ ಮೊತ್ತದ ಬಡ್ಡಿ ಹಾಕುವುದು ನ್ಯಾಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಮನೆ ಸ್ವಾದೀನಕ್ಕೆ ಬ್ಯಾಂಕ್ ನೊಟೀಸ್
ಬ್ಯಾಂಕಿನವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಸ್ವಾದೀನ ಪಡಿಸಿಕೊಳ್ಳುವ ನೋಟಿಸ್ ಅಂಟಿಸಿ ಹೋಗಿದ್ದಾರೆ. ಇದರಿಂದ ಕುಪೇಂದ್ರಪ್ಪ ಅವರ ಕುಟುಂಬ ಆತ್ಮಹತ್ಯೆಯ ದಾರಿ ಹಿಡಿದಿತ್ತು. ಗ್ರಾಮಸ್ಥರೆಲ್ಲ ಸೇರಿ ಚಂದಾ ಸಂಗ್ರಹಿಸಿ ಮನೆಯಿಂದ ಕುಟುಂಬದವರನ್ನು ಹೊರ ಹಾಕುವುದನ್ನು ತಪ್ಪಿಸಲು ಸಿದ್ದರಿದ್ದಾರೆ ಎಂದು ರೈತ ಸಂಘದ ಕಾರ್ಯಕರ್ತರು ತಿಳಿಸಿದರು.
ಮನೆಯಲ್ಲಿ ಎಲ್ಲರೂ ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಅನ್ಯಾಯವಾಗಿ ಬ್ಯಾಂಕ್ ವಿಧಿಸಿದ ಕೋಟಿಗಟ್ಟಲೆ ಹಣ ಪಾವತಿ ಮಾಡುವುದು ಅಸಾಧ್ಯ. ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಡಿದ ಬ್ಯಾಂಕ್ಗಳು ರೈತರಿಂದ ಹೆಚ್ಚಿನ ಹಣ ವಸೂಲು ಮಡುವುದು ನ್ಯಾಯವಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು. ನ್ಯಾಯ ದೊರಕದಿದ್ದಲ್ಲಿ ರೈತ ಸಂಘ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿತು.
ಸಚಿವ, ಸಂಸದರಿಗು ಮನವಿ
ಜಿಲ್ಲಾ ಪಂಚಾಯಿತಿಯಲ್ಲಿ ಕೆಡಿಪಿ ತ್ರೈಮಾಸಿಕ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ರೈತ ಸಂಘ ಸಮಸ್ಯೆಯನ್ನು ಮನವರಿಕೆ ಮಾಡಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಎಚ್.ಆರ್.ಬಸವರಾಜಪ್ಪ, ಈರಣ್ಣ ಅರೆಬಿಳಚಿ, ಎಸ್.ಶಿವಮೂರ್ತಿ, ಹಿಟ್ಟೂರು ರಾಜು ಸೇರಿದಂತೆ ಮತ್ತಿತರರಿದ್ದರು.
ಇದನ್ನೂ ಓದಿ – ಸಾಗರ – ಸೊರಬ – ಶಿಕಾರಿಪುರದಿಂದ ಬೆಂಗಳೂರಿಗೆ ಎರಡು KSRTC ಪಲ್ಲಕ್ಕಿ ಬಸ್, ಟೈಮಿಂಗ್ ಪ್ರಕಟ