SHIVAMOGGA LIVE NEWS | 6 JANUARY 2024
SHIMOGA : ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ವಿರೋಧಿಸಿ ರೈತರು ದಿಢೀರ್ ರಸ್ತೆ ತಡೆ ನಡೆಸಿದರು. ಇದರಿಂದ ಶಿವಮೊಗ್ಗ ಭದ್ರಾವತಿ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನಗಳು ಸಾಲುಗಟ್ಟಿ ನಿಂತಿದ್ದವು.
ರೈತರ ಆಕ್ರೋಶಕ್ಕೆ ಕಾರಣವೇನು?
ಎಡ ಮತ್ತು ಬಲ ದಂಡೆ ನಾಲೆಗಳಿಗೆ ಆನ್ ಆಫ್ ಮಾದರಿಯಲ್ಲಿ ಹಂತ ಹಂತವಾಗಿ ನೀರು ಹರಿಸುವ ತೀರ್ಮಾನವಾಗಿದೆ. ಇದರಿಂದ ಬೆಳಹಾನಿಯಾಗಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಸಚಿವರೊಂದಿಗೆ ತಾವು ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದರು. ಈ ಹೊತ್ತಿಗಾಗಲೆ ಸಚಿವರು ಕಾಡಾ ಕಚೇರಿಯಿಂದ ನಿರ್ಗಮಿಸಿದರು. ಆಕ್ರೋಶಗೊಂಡ ರೈತರು ದಿಢೀರ್ ರಸ್ತೆ ತಡೆ ಮಾಡಿದರು.
ಇದನ್ನೂ ಓದಿ – ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ದಿನಾಂಕ ಪ್ರಕಟ, ಆನ್ ಆಫ್ ಮಾದರಿ ಪಾಲನೆಗೆ ನಿರ್ಧಾರ
ಶಾಸಕರು, ಮುಖಂಡರಿಗೆ ಘೆರಾವ್
ರಸ್ತೆಯಿಂದ ರೈತರನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ ರೈತರ ಜೊತೆ ಚರ್ಚೆಗೆ ಆಗಮಿಸಿದ ರೈತ ಮುಖಂಡರು, ಶಾಸಕರಿಗೆ ರೈತರು ಘೆರಾವ್ ಹಾಕಿದರು. ರಸ್ತೆಯ ಒಂದು ಬದಿಯಲ್ಲಿ ರೈತರನ್ನು ತೆರವು ಮಾಡಿದ ಪೊಲೀಸರು, ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಆದರೆ ಮತ್ತೊಂದು ಬದಿಯಲ್ಲಿ ರಸ್ತೆ ಮೇಲೆ ಕುಳಿತ ರೈತರು ಪ್ರತಿಭಟನೆ ನಡೆಸಿದರು.