ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020
ಗಜಾನನ ಸಾರಿಗೆ ಸಂಸ್ಥೆಯ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಸಾಗರ ನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಗಲಾಟೆಗೆ ಕಾರಣವೇನು?
ಲಾಕ್ಡೌನ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರದಿಂದ ಹಲವು ಮಾರ್ಗದಲ್ಲಿ ಬಸ್ ಸಂಚಾರ ಪುನಾರಂಭವಾಗಲಿದೆ ಎಂಬ ಮಾಹಿತಿ ಹಿನ್ನೆಲೆ ಕಾರ್ಮಿಕರು ಕಂಪನಿಗೆ ಆಗಮಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ.
ಮುಸುಕಿನ ಗುದ್ದಾಟ ಬಹಿರಂಗ
ಗಜಾನನ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕರು ಗುಂಪುಗಳಾಗಿದ್ದಾರೆ. ಒಂದು ಗುಂಪು ಮ್ಯಾನೇಜ್ಮೆಂಟ್ ಪರವಾಗಿದೆ. ಮತ್ತೊಂದು ಕಾರ್ಮಿಕರ ಪರವಾಗಿದೆ ಎಂದು ಹೇಳಲಾಗುತ್ತಿದೆ. ಬಹು ಸಮಯದಿಂದ ಈ ಗುಂಪುಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಭಾನುವಾರ ಇದು ಬಹಿರಂಗವಾಗಿ ಸ್ಫೋಟಗೊಂಡಿದೆ.
ದೂರು, ಪ್ರತಿದೂರು
ಗಲಾಟೆಯಲ್ಲಿ ಅನಿಲ್ ಮತ್ತು ದಿನೇಶ್ ಎಂಬುವವರಿಗೆ ಗಾಯವಾಗಿದ್ದು, ಅವರನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂಬಂಧ ಅನಿಲ್ ಅವರು ವೆಂಕಟೇಶ್ ಮತ್ತು ಗೋಪಾಲಶೆಟ್ಟಿ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಮತ್ತೊಂದೆಡೆ ವೆಂಕಟೇಶ್ ಅವರು ಆನಂದ್, ದಿನೇಶ್, ಅನಿಲ್, ಮಂಜಪ್ಪ ವಿರುದ್ಧ ದೂರು ನೀಡಿದ್ದಾರೆ.
ಸಂಕಷ್ಟದಲ್ಲಿರುವ ಕಾರ್ಮಿಕರು
ಲಾಕ್ಡೌನ್ ಬಳಿಕ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬಸ್ ಸಂಚಾರ ನಿಧಾನಕ್ಕೆ ಪುನಾರಂಭವಾಗುತ್ತಿದ್ದು, ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. ಆದರೆ ಈ ನಡುವೆ ಸಂಭವಿಸಿರುವ ಅಹಿತಕರ ಘಟನೆ ಸಾರಿಗೆ ವಲಯದಲ್ಲಿ ಬೇಸರ ಮೂಡಿಸಿದೆ.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]