SHIVAMOGGA LIVE NEWS | 22 MARCH 2024
ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
BYKODU : ಮನೆ ಸಮೀಪದ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಐದು ವರ್ಷದ ಬಾಲಕಿ ಪ್ರಜ್ಞಾ ಮೃತಪಟ್ಟಿದ್ದಾಳೆ. ಬ್ಯಾಕೋಡು ಸಮೀಪದ ಚಂಗೊಳ್ಳಿಯಲ್ಲಿ ಘಟನೆ ಸಂಭವಿಸಿದೆ. ರವಿಚಂದ್ರ, ವೀಣಾ ದಂಪತಿ ಪುತ್ರಿ ಪ್ರಜ್ಞಾ, ಶಾಲೆಯಿಂದ ಮನೆಗೆ ಬಂದು ತನ್ನ ತಮ್ಮನೊಂದಿಗೆ ಆಟವಾಡುತ್ತಿದ್ದ ಸಂದರ್ಭ ಕೃಷಿ ಹೊಂಡಕ್ಕೆ ಕಾಲು ಜಾರಿ ಇಬ್ಬರೂ ಬಿದ್ದಿದ್ದಾರೆ. ಇವರ ಚೀರಾಟ ಕೇಳಿದ ಮನೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ತಮ್ಮನನ್ನು ರಕ್ಷಿಸಿದ ಪ್ರಜ್ಞಾ, ತಾನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಲ್ಫಿ ತೆಗೆಯುವ ವೇಳೆ ನದಿಗೆ ಬಿದ್ದು ಸಾವು
THIRTHAHALLI : ಯುವಕನೊಬ್ಬ ಸೆಲ್ಫಿ ತೆಗೆಯುವ ವೇಳೆ ಆಯತಪ್ಪಿ ತುಂಗಾ ನದಿಗೆ ಬಿದ್ದು ಮೃತಪಟ್ಟಿದ್ದಾನೆ. ಉತ್ತರ ಪ್ರದೇಶ ಮೂಲದ ಅಬ್ದುಲ್ ಕರೀಂ (24) ಮೃತ ಯುವಕ. ಪಟ್ಟಣದ ಬಾಳೇಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗ ಬುಧವಾರ ಘಟನೆ ಸಂಭವಿಸಿದೆ. ಜತೆಗಿದ್ದ ಸ್ನೇಹಿತರು ಈತನ ರಕ್ಷಣೆಗೆ ಮುಂದಾಗಿದ್ದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಹೊನ್ನೂರಿನಲ್ಲಿ ಅಪಘಾತ, ಚಿಕಿತ್ಸೆ ಫಲಿಸದೆ ಸಾವು
HOLEHONNURU : ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಿದ್ದಲಿಂಗಪ್ಪ (45) ಎಂಬುವರು ಬುಧವಾರ ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಕವಿತಾ, ಪುತ್ರ, ಪುತ್ರಿ ಇದ್ದಾರೆ. ಹೊಳೆಹೊನ್ನೂರು ಪಟ್ಟಣಕ್ಕೆ ಬರಲು ವಿವೇಕಾನಂದ ಲಯನ್ಸ್ ವಿದ್ಯಾಶಾಲೆ ಎದುರು ರಸ್ತೆ ಪಕ್ಕದಲ್ಲಿ ನಿಂತಿದ್ದ ಸಿದ್ದಲಿಂಗಪ್ಪ ಅವರಿಗೆ ಬೈಕ್ ಡಿಕ್ಕಿಯಾಗಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಿದ್ದಲಿಂಗಪ್ಪ ಅವರ ನೇತ್ರಗಳನ್ನು ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡಿ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗಾಜು ಒಡೆದ ದುಷ್ಕರ್ಮಿಗಳು, ಲಾಂಗು, ಮಚ್ಚು ಹಿಡಿದು ಸಂಚಾರ