ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021
ಬೆಳಗಿನ ಜಾವ ಆಸ್ಪತ್ರೆಗೆ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಕಳ್ಳರು ಕೊರಳಿಗೆ ಕೈ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳೆ ಸರದ ಒಂದು ಭಾಗವನ್ನ ಹಿಡಿದುಕೊಂಡಿದ್ದಾರೆ. ಹಾಗಾಗಿ ಕಳ್ಳರು ಸರದ ಅರ್ಧ ಭಾಗ, ಮೂರು ಚಿನ್ನದ ಕಾಸನ್ನು ಕದ್ದೊಯ್ದಿದ್ದಾರೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಹೊನ್ನವಿಲೆ ಗ್ರಾಮದ ಸುನೀತಾ (54) ಎಂಬುವವರ ಸರ ಕಳ್ಳತನ ಮಾಡಲಾಗಿದೆ. ಮೊಮ್ಮಗನೊಂದಿಗೆ ಬೆಳಗಿನ ಜಾವ 4 ಗಂಟೆಗೆ ದುರ್ಗಾ ಕ್ಲಿನಿಕ್’ಗೆ ನಡೆದು ಹೋಗುತ್ತಿದ್ದಾಗ, ದುರ್ಗಿಗುಡಿಯಲ್ಲಿ ಘಟನೆ ಸಂಭವಿಸಿದೆ.
ಆಟೋದಲ್ಲಿ ಬಂದ ಖದೀಮರು
ಸುನೀತಾ ಅವರು ತಮ್ಮ ಸಹೋದರಿಯ ಮನೆಯಿಂದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬರುತ್ತಿದ್ದರು. ಬೆಳಗಿನ ಜಾವ ಯಾವುದೆ ಆಟೋ ಸಿಗದ ಹಿನ್ನೆಲೆ, ಪೇಪರ್ ಹಾಕುವ ಹುಡುಗನೊಬ್ಬನ ನೆರವಿನೊಂದಿಗೆ ಆತನ ಬೈಕಿನಲ್ಲಿ ಸುನೀತಾ ಅವರನ್ನು ಲಕ್ಷ್ಮೀ ಟಾಕೀಸ್’ವರೆಗೆ ಬಂದಿದ್ದಾರೆ. ಅಲ್ಲಿಂದ ನಡೆದುಕೊಂಡು ದುರ್ಗೀಗುಡಿವರೆಗೂ ಸುನೀತಾ ತಮ್ಮ ಮೊಮ್ಮಗನೊಂದಿಗೆ ಬಂದಿದ್ದಾರೆ.
ದುರ್ಗೀಗುಡಿ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಸುನೀತಾ ಅವರ ಬಳಿಗೆ ಮೂರು ಮಂದಿ ಆಟೋದಲ್ಲಿ ಬಂದಿದ್ದಾರೆ. ಕೆಳಗಿಳಿದವರೆ ಸುನೀತಾ ಅವರ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭ, ಎರಡು ಎಳೆಯ ಚಿನ್ನದ ಸರದ ಒಂದು ಭಾಗವನ್ನು ಸುನೀತಾ ಅವರು ಹಿಡಿದುಕೊಂಡು, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಮತ್ತೊಂದು ಭಾಗವನ್ನು ಕಸಿದುಕೊಂಡು ಕಳ್ಳರು ಆಟೋದಲ್ಲಿ ಪರಾರಿಯಾಗಿದ್ದಾರೆ.
ಮೂರು ಬಂಗಾರದ ಕಾಸು
ಕಳ್ಳರು ಹಿಡಿದುಕೊಂಡ ಭಾಗದಲ್ಲಿ ಚಿನ್ನದ ಸರದ ಜೊತೆಗೆ ಚಿನ್ನದ ಮೂರು ಕಾಸು ಇತ್ತು ಎಂದು ಸುನೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಇದರ ಅಂದಾಜು ಮೌಲ್ಯ 80 ಸಾವಿರ ರೂ. ಎಂದು ಹೇಳಲಾಗುತ್ತಿದೆ.
ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳರ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂ