ಶಿವಮೊಗ್ಗ ಲೈವ್.ಕಾಂ | SHIMOGA NEWS | 18 DECEMBER 2020
ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಡಿಸೆಂಬರ್ 19ರಂದು ಆನ್ಲೈನ್ ಮೂಲಕ ಸಚಿವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಯಾವೆಲ್ಲ ರಸ್ತೆಗಳ ಅಭಿವೃದ್ಧಿಯಾಗಲಿದೆ?
ಚಿತ್ರದುರ್ಗ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ
ಈ ರಸ್ತೆಯು 102.60 ಕಿ.ಮೀ ಇದೆ. ಹಿಂದೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. 66.31 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, 36.29 ಕಿ.ಮೀ ಕಾಮಗಾರಿ ಬಾಕಿ ಇದೆ. ಈ ರಸ್ತೆಯಲ್ಲಿ ನಾಲ್ಕು ಪಥದ ಬೈಪಾಸ್ ರಸ್ತೆ, ಮೂರು ರೈಲ್ವೆ ಮೇಲ್ಸೇತುವೆ, ಹೊಳೆಹೊನ್ನೂರು ಬಳಿ ಭದ್ರಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕ್ರೀಡಾ ಗ್ರಾಮ, ಪರಿಶೀಲನೆಗೆ ಬಂದಿದೆ ಕೇಂದ್ರ ತಂಡ, ಎಲ್ಲಾಗುತ್ತೆ? ಏನಿದರ ಉಪಯೋಗ?
ಶಿವಮೊಗ್ಗದ ವಿದ್ಯಾನಗರದ ಬಳಿ ಮೇಲ್ಸೆತುವೆ
ರಾಷ್ಟ್ರೀಯ ಹೆದ್ದಾರಿ 13ರಲ್ಲಿ ವೃತ್ತಾಕಾರಾದ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. 44 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ತೀರ್ಥಹಳ್ಳಿ – ಕೊಪ್ಪ – ಶೃಂಗೇರಿ ದ್ವಿಪಥ ರಸ್ತೆ
ಸೊಲ್ಲಾಪುರ – ಮಂಗಳೂರು ರಾಷ್ಟ್ರೀಯ ಹೆದ್ದಾರಿ 13ರಲ್ಲಿ ತೀರ್ಥಹಳ್ಳಿ – ಕೊಪ್ಪ – ಶೃಂಗೇರಿ ದ್ವಿಪಥ ರಸ್ತೆ ನಿರ್ಮಿಸಲಾಗುತ್ತಿದೆ. 96.08 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು 12 ಮೀ. ಅಗಲ ಮಾಡಲಾಗುತ್ತಿದೆ. ತೀರ್ಥಹಳ್ಳಿಯ ನ್ಯಾಷನಲ್ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.
ನಿಟ್ಟೂರು, ಹೊಸನಗರದಲ್ಲಿ 7 ಹೊಸ ಸೇತುವೆ
ಬೈಂದೂರು – ರಾಣೇಬೆನ್ನೂರು ರಸ್ತೆಯ ನಿಟ್ಟೂರು ಮತ್ತು ಹೊಸನಗರ ಭಾಗದಲ್ಲಿ ಶರಾವತಿ ಹಿನ್ನೀರು ವ್ಯಾಪ್ತಿಯಲ್ಲಿ ಶಿಥಿಲಗೊಂಡ ಸೇತುವೆಗಳ ಬದಲಿಗೆ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಮಡೋಡಿ, ಮತ್ತಿಮನೆ, ನಗರ ಚಿಕ್ಕಪೇಟೆ, ಆರೋಡಿ, ಕಾರಣಗಿರಿ, ಹೊಸನಗರದ ಹೊಸಮನೆ ಬಳಿ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. 12 ಮೀಟರ್ ಅಗಲದ ಸೇತುವೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕೆ 19.77 ಕೋಟಿಯ ಅಂದಾಜು ಪಟ್ಟಿ ಸಲ್ಲಿಸಲಾಗಿದೆ.
ತೀರ್ಥಹಳ್ಳಿ – ಉಡುಪಿ ರಸ್ತೆಯಲ್ಲಿ ಕಿರು ಸೇತುವೆ
ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ, 8.20 ಕೋಟಿ ರೂ ವೆಚ್ಚದಲ್ಲಿ ಕಿರು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಆಗುಂಬೆ ಬಳಿ, ಭಟ್ಟರ ಹಳ್ಳಿ, ಗೌರಿಹಕ್ಲು, ಕಂಚಿನಳ್ಳಿಯಲ್ಲಿ ಕಿರುಸೇತುವೆಗಳನ್ನು ನಿರ್ಮಸಲಾಗುತ್ತದೆ.
IMAGE : REFERENCE PURPOSE
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]